
ವಿಜಯಪುರ ಜಿಲ್ಲೆಯಲ್ಲಿ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದವರನ್ನು ಗಡಿಪಾರು ಮಾಡಿ, ಸಂತ್ರಸ್ತ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಹಾಸನದ ಮಾದಿಗ ದಂಡೋರದಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ ಆರ್ ವಿಜಯಕುಮಾರ್ ಮಾತನಾಡಿ, “ಶತಮಾನದಿಂದ ಸಂಕೋಲೆಯಲ್ಲಿ ನೊಂದಿರುವ ದಲಿತರ ಮೇಲೆ ಅಲ್ಲಿನ ಪಾಳೆಗಾರಿ ಪಟ್ಟಭದ್ರ ಹಿತಾಸಕ್ತಿಯನ್ನು ಹೊಂದಿರುವ ಗೂಂಡಾಡಗಳು 4 ಮಂದಿ ದಲಿತರ ಮೇಲೆ ಧಾರುಣವಾಗಿ ಹಲ್ಲೆ ಮಾಡಿರುವುದನ್ನು ದಲಿತ ಮತ್ತು ಜನಪರ ಚಳುವಳಿಗಳ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ” ಎಂದರು.
“ಮುಖ್ಯಮಂತ್ರಿಗಳೇ ಈ ಸರ್ಕಾರದಲ್ಲಿ ನೀವು ಜನಪ್ರಿಯ ಮತ್ತು ಶೋಷಿತ ಸಮುದಾಯಗಳ ರಕ್ಷಣೆ ಮಾಡುವ ಮುಖ್ಯಮಂತ್ರಿಯೆಂದು ಬಲವಾಗಿ ಹೇಳುಕೊಳ್ಳುತ್ತೀರಿ! ಇಂತಹ ನಾಡಿನಲ್ಲಿ, ಇಟ್ಟಂಗಿ ಭಟ್ಟಯ ಘಟನೆ ಅಮಾನವಿಯ. ನಿಮ್ಮ ಸರ್ಕಾರದ ಅವಧಿಯಲ್ಲಿ ದಲಿತರ ಬದುಕು ದಿನದಿಂದ ದಿನಕ್ಕೆ ಅಯೋಮಯವಾಗುತ್ತಿರುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಇಟ್ಟಿಗೆ ಕೆಲಸಕ್ಕೆ ಒಂದು ದಿನ ತಡವಾಗಿ ಬಂದಂತಹ ದಲಿತ ಸಮುದಾಯದ ಬಡವರ ಮೇಲೆ ಪಾಳೆಗಾರಿಕೆ ಹಿತಾಸಕ್ತಿ ಹೊಂದಿರುವ ದುರುಳರು ಮನಸ್ಸೋಇಚ್ಚೆ ಹಲ್ಲೆ ಮಾಡಿರುವ ದೃಶ್ಯ ಬಡವರ ಮೇಲೆ ಸರ್ಕಾರಕ್ಕೆ ಹಿತಾಸಕ್ತಿ ಇಲ್ಲವೆಂಬುದನ್ನು ತೋರಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸಂತ್ರಸ್ತರಿಗೆ ಕೂಡಲೇ ತಲಾ 10 ಲಕ್ಷ ಪರಿಹಾರ ನೀಡಬೇಕು. ಕಾರ್ಮಿಕ ಮತ್ತು ಸಮಾಜ ಕಲ್ಯಾಣ ಸಚಿವರು ಕೂಡಲೇ ಸಂತ್ರಸ್ತರನ್ನು ಭೇಟಿ ಮಾಡಬೇಕು. ಕಾರ್ಮಿಕ ಇಲಾಖೆ ಆಯುಕ್ತರನ್ನು ಅಮಾನತು ಮಾಡಬೇಕು ಮತ್ತು ಪರಿಸರ ಇಲಾಖೆಯ ಮುಖ್ಯಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
“ಆರೋಪಿಗಳನ್ನು ಕೂಡಲೇ ಜಿಲ್ಲೆಯಿಂದ ಗಡಿಪಾರು ಮಾಡಿ, ಅವರ ಆಸ್ತಿ ಪಾಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ನ್ಯಾಯಾಂಗ ನಿಷ್ಪಕ್ಷಪಾತ ತನಿಖೆ ನಡೆಯುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿ ಇದಕ್ಕೆ ಸಂಬಧಿಸಿದಂತೆ ಬೆಂಗಾವಲಾಗಿ ನಿಂತಿರುವ ರಾಜಕಾರಣಿಗಳ ಮೇಲೂ ಕಾನೂನು ಕ್ರಮ ಜರುಗಿಸಬೇಕು. ಮುಂದೆ ಅವರಿಗೆ ನ್ಯಾಯಾಂಗ ಗಲ್ಲುಶಿಕ್ಷೆ ವಿಧಿಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಲಿತ ಮತ್ತು ಜನಪರ ಚಳುವಳಿಗಳ ಮುಖಂಡರುಗಳಾದ ಧರ್ಮೇಶ್, ವಿಜಯ್ ಕುಮಾರ್, ಹೆಚ್ ಕೆ ಸಂದೇಶ್, ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ್, ಸತೀಶ್, ಅಂಬುಗ ಮಲ್ಲೇಶ್, ರಾಜೇಶ್, ಸುನೀಲ್, ಪ್ರವೀಣ್, ಕೆ ವೈ ಜಗದೀಶ್, ಬೈರೇಶ್ ಹಳೇಬೀಡು ಸೇರಿದಂತೆ ಬಹುತೇಕರು ಇದ್ದರು.