
ಹಂಪಿ ಉತ್ಸವದಂತೆ ಗಂಗಾವತಿಯ ಐತಿಹಾಸಿಕ ಆನೆಗುಂದಿ ಉತ್ಸವ ನಡೆಸಲು ಕ್ರಮವಹಿಸಬೇಕು ಎಂದು ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಮ್ಯಾಗಳಮನಿ ಅವರು, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್ ತಂಗಡಗಿ ಅವರನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, “ಇತ್ತೀಚೆಗೆ ಸರ್ಕಾರ ಆನೆಗುಂದಿ ಉತ್ಸವದ ಬಗ್ಗೆ ಹೆಚ್ಚು ಗಮನ ನೀಡುತ್ತಿಲ್ಲ. ಹಂಪಿ ಜೊತೆಗೆ ಆನೆಗುಂದಿ ಉತ್ಸವಕ್ಕೆ ಮುಂದಾದರೆ ಪ್ರವಾಸಕ್ಕೆ ಬರುವವರೂ ಹೆಚ್ಚು ಆಕರ್ಷಿತರಾಗುತ್ತಾರೆ. ಐತಿಹಾಸಿಕ ಆನೆಗುಂದಿ ಉತ್ಸವ ಹೆಸರಾಗುತ್ತದೆ. ಹಾಗಾಗಿ ಕೂಡಲೇ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿಯವರು ಇತ್ತ ಗಮನಹರಿಸಬೇಕು” ಎಂದರು.
“ಉಸ್ತುವಾರಿ ಸಚಿವರು ಗೆದ್ದಾಗಲೆಲ್ಲ ಮಂತ್ರಿಗಳಾಗಿದ್ದಾರೆ. ಆದರೂ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದ ಅಭಿವೃದ್ಧಿಯಾಗಿಲ್ಲ. ಈಗಲಾದರೂ ಸಾರ್ವಜನಿಕ ಸಮಸ್ಯೆಗಳ ಕುರಿತು ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕಡೆಗೆ ಹೆಚ್ಚು ಒತ್ತು ನೀಡಬೇಕು” ಎಂದು ಆಗ್ರಹಿಸಿದರು.
ಪತ್ರಿಕಾ ಹೇಳಿಕೆ ನೀಡುವ ವೇಳೆ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ದುರ್ಗೇಶ್ ಜಿ ಹೊಸಳ್ಳಿ, ರಾಘು ಕಡೆಬಾಗಿಲು, ಶಬ್ಬೀರ್ ಹುಸೇನ್, ಬಸವರಾಜ್ ನಾಯಕ, ಮುತ್ತಣ್ಣ ಹೊಸಳ್ಳಿ ಮಂಜುನಾಥ ಗುಡಿಗೌಡ, ಸಿ ರಮೇಶ್, ರಾಮಣ್ಣ ರುದ್ರಾಕ್ಷಿ, ಚಿದಾನಂದ, ಚಂದ್ರು, ಮಂಜು, ನರಸಪ್ಪ ಸೇರಿದಂತೆ ಇತರರು ಇದ್ದರು.