
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆರಿಗೆಯಾಗಿದ್ದ ಬಾಣಂತಿಯೊಬ್ಬರು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಮುತ್ತವ್ವ ಗೊಳಸಂಗಿ(21) ಸಾವಿಗಿಡಾದ ಬಾಣಂತಿ. ಇವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆಕೆಯ ಪತಿ ಸಂತೋಷ ಗೊಳಸಂಗಿ ಆರೋಪ ಮಾಡಿದ್ದಾರೆ.
“ಆರೋಗ್ಯದಲ್ಲಿ ತೊಂದರೆಯಾದಾಗ ಗುರುವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಿದ್ದು, 11 ಗಂಟೆಗೆ ಹೆರಿಗೆ ಮಾಡಿಸಲು ಶಸ್ತ್ರ ಚಿಕಿತ್ಸಾ ಕೊಠಡಿಗೆ ಕರೆದುಕೊಂಡು ಹೋಗಿದ್ದಾರೆ. ಸಂಜೆ 4.30ಕ್ಕೆ ಹೆರಿಗೆಯಾಗಿದೆಯೆಂದು ಹೇಳಿದ್ದಾರೆ. ಆದರೆ ಹೆರಿಗೆ ನಂತರ ಮುತ್ತವ್ವ ನೋವು ಅನುಭವಿಸುತ್ತಿದ್ದಳು ಆ ಬಗ್ಗೆ ವೈದ್ಯರು ಹಾಗೂ ನರ್ಸ್ ಗಮನಕ್ಕೆ ತಂದರೂ ಅವರು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದಾಗಿ ನನ್ನ ಪತ್ನಿ ಸಾವಿಗಿಡಾಗಿದ್ದಾರೆ” ಎಂದು ದೂರಿದ್ದಾರೆ.
“ನಿತ್ಯವೂ ಸಾಕಷ್ಟು ಹೆರಿಗೆ ಮಾಡಿಸುತ್ತೇವೆ. ನಮ್ಮಲ್ಲಿ ಈವರೆಗೂ ಬಾಣಂತಿ ಮತ್ತು ಶಿಶುಗಳ ಸಾವುಗಳು ಆಗಿಲ್ಲ. ಇದು ಯಾವ ಕಾರಣಕ್ಕಾಗಿ ಆಗಿದೆ ಎನ್ನುವುದು ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಗೊತ್ತಾಗಲಿದೆ” ಎಂದು ತಾಲೂಕು ವೈದ್ಯಾಧಿಕಾರಿ ಡಾ.ಬಸನಗೌಡ ತಿಳಿಸಿದ್ದಾರೆ.