ಹಾಸನ: ಗ್ಯಾರಂಟಿ ಹೆಸರಿನಲ್ಲಿ ದಲಿತರಿಗೆ ಮೋಸ, ಕೋಟ್ಯಾಂತರ ರೂಗಳ ಗುಳಂ ಮಾಡಿರುವ ವಿರುದ್ಧ ಬಿಜೆಪಿ ಪಕ್ಷದಿಂದ ಪ್ರತಿಭಟಿಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸುವ ಮೂಲಕ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಿಗೆ ಜನಾಂದೋಲನದ ಹಕ್ಕೋತ್ತಾಯ ಮುಟ್ಟಿಸಿದರು.
ನಗರದ ಆರ್.ಸಿ. ರಸ್ತೆ, ಗಂಧದ ಕೋಠಿ ಎದುರು ಇರುವ ಬಿಜೆಪಿ ಜಿಲ್ಲಾ ಕಛೇರಿ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಬಿ.ಎಂ . ರಸ್ತೆ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ಮೊದಲು ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ನಂತರ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಇದೆ ವೇಳೆ ಬಿಜೆಪಿ ಸಂಸದ ಯದುವೀರ್ ಕೃಷ್ಣ ದತ್ತ ಒಡೆಯರ್ ಉದ್ದೇಶಿಸಿ ಮಾತನಾಡಿ, ೨೦೨೩ರ ಕರ್ನಾಟಕ ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದ ದುರಾಸೆಗೆ, ಹೇಗಾದರು ಮಾಡಿ ಅಧಿಕಾರ ಹಿಡಿಯಲೇಬೇಕೆಂದು ಐದು ಗ್ಯಾರೆಂಟಿಗಳನ್ನು ಘೋಷಿಸಿತು. ಅದನ್ನು ಮತದಾರರಿಗೆ ನಂಬಿಸಲು ಹರಸಾಹಸ ನೆಡಸಿತು. ಆಗ ಕಾಂಗ್ರೆಸ್ ಪಕ್ಷದ ಯಾವ ನಾಯಕರೂ ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕೆ ಎಸ್.ಸಿ.ಎಸ್.ಪಿ. ಮತ್ತು ಟಿ.ಎಸ್.ಪಿ. ಹಣ ಬಳಸುವುದಾಗಿ ಹೇಳಿರಲಿಲ್ಲ. ಆದರೆ ಮತದಾರರನ್ನು ಯಾಮಾರಿಸಿ ಚುನಾವಣೆ ಗೆದ್ದ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದ ತರುವಾಯ ಮಾಡಿದ್ದೇನು? ಎಂದು ಪ್ರಶ್ನೆ ಮಾಡಿದರು.
೨೦೨೩ರಲ್ಲಿ ಎಸ್.ಸಿ.ಎಸ್.ಪಿ. ಯಿಂದ ೭೭೧೩.೧೫ ಸಾವಿರ ಕೋಟಿ ರೂ ಮತ್ತು ಟಿ.ಎಸ್.ಪಿ. ಯಿಂದ ೩೪೩೦.೮೫ ಸಾವಿರ ಕೋಟಿರೂ ಒಟ್ಟಾರೆ ೧೧೧೪೪.೦೦ ಸಾವಿರ ಕೋಟಿ ರೂಗಳನ್ನು ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕೆ ದುರ್ಬಳಕೆ ಮಾಡಿಕೊಂಡಿತು ಎಂದು ದೂರಿದರು. ಮೊದಲಸಲ ದಲಿತರ ಮೀಸಲು ನಿಧಿಗೆ ಅನೈತಿಕವಾಗಿ ಕೈ ಹಾಕುವಾಗ ಮುಖ್ಯಮಂತ್ರಿಗಳು ಹಿಂಜರಿಕೆ ತೋರ್ಪಡಿಸಿದ್ದರು. ಸಚಿವ ಸಂಪುಟ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವರೂ ಸೇರಿದಂತೆ ಕೆಲ ಸಚಿವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಕೆಲವೇ ತಿಂಗಳಲ್ಲಿ ಸರ್ಕಾರ ಎಮ್ಮೆ ಚರ್ಮ ಬೆಳಸಿಕೊಂಡು, ಸಂವೇದನೆ ಕಳೆದುಕೊಂಡು ಎಸ್.ಸಿ./ ಎಸ್.ಟಿ. ಸಮುದಾಯದ ಹಣ ನುಂಗಿ ದುರಹಂಕಾರದ ಸ್ಥಿತಿ ತಲುಪಿದೆ ಎಂದು ಕಿಡಿಕಾರಿದರು. ಕಳೆದ ವರ್ಷ ಅಂದರೆ ೨೦೨೪ರಲ್ಲಿ ಸರ್ಕಾರ ಇದೇ ಚಾಳಿಯನ್ನು ಮುಂದುವರಿಸಿತು. ಎಸ್.ಸಿ.ಎಸ್.ಪಿ. ನಿಧಿಯಿಂದ ೯೯೮೦.೬೬ ಸಾವಿರ ಕೋಟಿ ರೂ ಮತ್ತು ಖಿSP ನಿಧಿಯಿಂದ ೪೩೦೨.೦೨ ಸಾವಿರ ಕೋಟಿ ರೂ ಒಟ್ಟಾರೆ ೧೪೨೮೨.೬೮ ಸಾವಿರ ಕೋಟಿ ರೂ ಗಳನ್ನು ಗ್ಯಾರೆಂಟಿ ಅನುಷ್ಠಾನಕ್ಕಾಗಿ ದುರ್ಬಳಕೆ ಮಾಡಿತು. ಈಗ ಭಂಡ ಕಾಂಗ್ರೆಸ್ ಸರ್ಕಾರ ತಾನು ಮಾಡಿದ್ದೇ ಸರಿ ಎಂದು ವಾದಿಸುತ್ತಿದೆ. ಆದರೆ ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳಲ್ಲಿ ಕೇವಲ ಪರಿಶಿಷ್ಟ ಜಾತಿ, ಪಂಗಡದವರು ಮಾತ್ರ ಇಲ್ಲ, ಸವರ್ಣಿಯರು, ಹಿಂದುಳಿದವರು, ಅಲ್ಪಸಂಖ್ಯಾತರು ಎಲ್ಲರೂ ಇದ್ದಾರೆ. ಉಳಿದವರಿಗೆಲ್ಲ ಸರ್ಕಾರ ತನ್ನ ಖಜಾನೆಯಿಂದ ಹಣ ಕೊಡುತ್ತದೆ. ಆದರೆ ಎಸ್ಸಿ, ಎಸ್ಪಿ ಮಂದಿಗೆ ’ದಲಿತರ ಮೀಸಲು ನಿಧಿ’ ಗೆ ಕನ್ನ ಹಾಕುತ್ತದೆ ಎಂದರೆ ಇದನ್ನು ಸಾಮಾಜಿಕ ನ್ಯಾಯ ಎನ್ನಲು ಸಾಧ್ಯವೇ ಎಂದರು.
ಎಸ್ಪಿ, ಎಸ್ಪಿ ಸಮುದಾಯಗಳ ಡಾ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ತಾಂಡ ಅಭಿವೃದ್ಧಿ ನಿಗಮ, ಬೋವಿ ಅಭಿವೃದ್ಧಿ ನಿಗಮ. ವಾಲ್ಮೀಕಿ ಅಭಿವೃದ್ಧಿ ನಿಗಮ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಈ ಎಲ್ಲಾ ನಿಗಮಗಳು ಸರ್ಕಾರದ ಹಣಕಾಸಿನ ನೆರವಿಲ್ಲದೆ ಸೋರಗಿವೆ. ಯಾವ ನಿಗಮದಲ್ಲಿಯೂ ಯಾವ ಯೋಜನೆಯೂ ಜಾರಿಯಾಗುತ್ತಿಲ್ಲ. ಇದು ದಲಿತ ಸಮುದಾಯಗಳಿಗೆ ಮಾಡಿರುವ ದ್ರೋಹವಾಗಿದೆ ಎಂದು ಆರೋಪಿಸಿದರು. ಸಾರಿಗೆ ಸಂಬಳಕ್ಕೂ ಸಹ ಕಾಸಿಲ್ಲದ ದಿವಾಳಿ ಸ್ಥಿತಿಯಿದೆ. ಹಣ ವರ್ಗಾವಣೆಗೆ ಅವಕಾಶ ಇಲ್ಲದಂತೆ ೭ಡಿ ರದ್ದು ಮಾಡಿದ್ದು ತಾನೇ ಎಂದು ಬೆನ್ನು ತಟ್ಟಿಕೊಳ್ಳುವ ಈ ಸರ್ಕಾರ ಈಗ ೭ಸಿ ಕಾಯ್ದೆ ರದ್ದು ಮಾಡಿಲ್ಲ ಎಂದು ಪಿಸುಗುಟ್ಟಿತ್ತಿದೆ. ೭ಸಿ ರದ್ದು ಮಾಡಿ ದಲಿತರ – ಅದಿವಾಸಿಗಳ ಮೀಸಲು ಹಣ ಸಂಪೂರ್ಣವಾಗಿ ಅವರಿಗೆ ಸಲ್ಲುವಂತೆ ಮಾಡಿ ಇದು ನಮ್ಮ ಅಗ್ರಹ ಎಂದರು. ಬರಲಿರುವ ಬಜೆಟ್ ೨೦೨೫-೨೬ ರಲ್ಲಿ ಮತ್ತೆ ೧೪೪೮೮.೮೬ ಸಾವಿರ ಕೋಟಿ ರೂಗಳನ್ನು ದುರ್ಬಳಕೆ ಮಾಡಲು ಹೊಂಚು ಹಾಕಿ ಕುಳಿತಿದೆ. ಈಗಾಗಲೇ ತನ್ನ ಐದು ಗ್ಯಾರೆಂಟಿಗಳಿಗೆ ಸಂಬಂಧಿಸಿದಂತೆ ’ದಲಿತರ ಮೀಸಲು ನಿಧಿ’ ಗೆ ಕನ್ನ ಹಾಕಲು ಪ್ರಸ್ಥಾವನೆ ಸಿದ್ಧಪಡಿಸಿದೆ ಎಂದು ಅನುಮಾನಿಸಿದರು. ಕಾಂಗ್ರೆಸ್ ಸರ್ಕಾರದ ಈ ಬೇಜವಾಬ್ದಾರಿ, ದಲಿತ ವಿರೋಧಿ ನೀತಿಯನ್ನು ನಾವು ಒಪ್ಪುವುದಿಲ್ಲ. ಸದನದ ಹೊರಗೆ ಮತ್ತು ಒಳಗೆ ನಾವು ಗಂಭೀರ ಹೋರಾಟ ಮಾಡುತ್ತೇವೆ, ಅದಕ್ಕಾಗಿ ಈ ಜನಾಂದೋಲನ. ರಾಜ್ಯದ ಪ್ರತಿ ಜಿಲ್ಲೆ, ತಾಲೂಕಿನಲ್ಲಿ ಜನ ಬೀದಿಗಿಳಿದು ಪ್ರತಿಭಟಿಸಲಿದ್ದಾರೆ. ಸರ್ಕಾರ ತಾನು ತುಳಿದಿರುವ ಅನೈತಿಕ ದಾರಿಯಿಂದ ಹಾಗೂ Sಅ / Sಖಿ ಸಮುದಾಯಗಳಿಗೆ ಮಾಡುತ್ತಿರುವ ದ್ರೋಹ, ಅನ್ಯಾಯದಿಂದ ಹಿಂದೆ ಸರಿಯಲಿ ಇದು ನಮ್ಮ ಹಕ್ಕೊತ್ತಾಯ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಚಾಮರಾಜ ನಗರ ಮಾಜಿ ಶಾಸಕ ಬಾಲರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಎಸ್.ಟಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಬೆಳ್ಳಿ ಗಂಗಾಧರ್, ವಕೀರು ಅರುಣ್ ಕುಮಾರ್, ಸಂಯೋಜಕ ಎಸ್.ಪಿ. ಲಿಂಬ್ಯನಾಯ್ಡ್, ಬಿಜೆಪಿ ಬಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಗಿರೀಶ್, ರೇಣುಕುಮಾರ್, ದೇವರಾಜೇಗೌಡ, ಆರ್.ಪಿ.ಐ. ರಾಜ್ಯಾಧ್ಯಕ್ಷ ಸತೀಶ್, ಎಸ್.ಡಿ. ಚಂದ್ರು, ಪರ್ವತಯ್ಯ ಇತರರು ಉಪಸ್ಥಿತರಿದ್ದರು.