ಬಳ್ಳಾರಿಯಲ್ಲಿ ಮಾ.23,24 ರಂದು ಎ.ಐ.ವೈ ಎಫ್ ನ ರಾಜ್ಯ ಸಮ್ಮೇಳನ: ಗಿರೀಶ್ ಹೇಳಿಕೆ
ಹಾಸನ: ಅಖಿಲ ಭಾರತ ಯುವಜನ ಫೆಡರೇಶನ್ ವತಿಯಿಂದ ಮಾರ್ಚ್ 23,24 ರಂದು ಬಳ್ಳಾರಿಯಲ್ಲಿ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಫೆಡರೇಶನ್ ನ ಜಿಲ್ಲಾ ಕಾರ್ಯದರ್ಶಿ ಗಿರೀಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತಾಡಿದ ಅವರು, ಫೆಡರೇಷನ್ ಜಿಲ್ಲಾಧ್ಯಕ್ಷರಾಗಿ ಸಂತು, ಸಕಲೇಶಪುರ, ಜಿಲ್ಲಾ ಕಾರ್ಯದರ್ಶಿ ಯಾಗಿ ಗಿರೀಶ್ ಎಲ್.ಬಿ. ಆಲೂರು, ಉಪಾಧ್ಯಕ್ಷರಾಗಿ ಹೇಮಂತ್ ಪಿ, ಹಾಸನ, ಖಜಾಂಚಿಯಾಗಿ
ಭುವನೇಶ್ವರಿ, ಅರಸೀಕೆರೆ ಹಾಗೂ ಸಹಕಾರ್ಯದರ್ಶಿ ಯಾಗಿ ಸಚ್ಚಿನ್ ಮತ್ತು ಸಾಗರ್, ಆಯ್ಕೆಯಾಗಿದ್ದಾರೆ ಈ ಮತ್ತು 7 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಅಖಿಲ ಭಾರತ ಯುವಜನ ಫೆಡರೇಷನ್ (AIYF) 3ಮೇ 1959ರಲ್ಲಿ ಸ್ಥಾಪನೆಗೊಂಡ ಸಂಘಟನೆಯಾಗಿದ್ದು ಭಾರತದ ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ಯುವ ಸಮೂಹವನ್ನು ಸಂಘಟಿಸಿ, ವೈಜ್ಞಾನಿಕ ಸಮಾಜ ನಿರ್ಮಾಣದ ಗುರಿಯೊಂದಿಗೆ ಜನ್ಮ ತಾಳಿದ ದೇಶಪ್ರೇಮಿ ಸಂಘಟನೆಯಾಗಿದೆ ಎಂದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಭಗತ್ ಸಿಂಗ್, ಸುಖದೇವ್ ರಾಜಗುರು. ಚಂದ್ರಶೇಖರ್ ಆಜಾದ್, ರಾಮ್ ಪ್ರಸಾದ್ ಬಿಸ್ಮಿಲ್,ಅಶ್ಚಾಕ್ ಉಲ್ಲಾ ಖಾನ್ರಂತಹ ನೂರಾರು ಕ್ರಾಂತಿಕಾರಿ ಯುವಕರು ಸ್ವಾತಂತ್ರ್ಯ ಭಾರತದ ಬಗ್ಗೆ ಕಂಡಿದ್ದ ಕನಸುಗಳನ್ನು ನನಸು ಮಾಡುವುದು ಮತ್ತು ಅವರ ಆಶಯಗಳನ್ನು ಇಂದಿನ ಯುವ ಜನಾಂಗಕ್ಕೆ ಅರಿವು ಮೂಡಿಸಿ ರಾಷ್ಟ್ರ ಪ್ರಜ್ಞೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಎಚ್ಚರಿಸುವ ಕೆಲಸದಲ್ಲಿ ಎ.ಐ.ವೈ.ಎಫ್. ಸಂಘಟನೆ ಸಕ್ರಿಯವಾಗಿದೆ.
ಇಂದು ಭಾರತ ದೇಶ ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳಾದ ಬಡತನ, ಹಸಿವು, ನಿರುದ್ಯೋಗ, ಭ್ರಷ್ಟಾಚಾರ, ಅಸಮಾನತೆ, ಅಸ್ಪೃಶ್ಯತೆ, ಮೌಡ್ಯತೆ, ಮತೀಯವಾದ, ಹಿಂಸೆ-ಕ್ರೌರ್ಯಗಳನ್ನು ಕೊನೆಗಾಣಿಸಿ ಶಾಂತಿ- ಸೌಹಾರ್ದತೆ-ಸಮಾನತೆಯ ಸಮಸಮಾಜದ ಸ್ಥಾಪನೆಗಾಗಿ ಶ್ರಮಿಸುತ್ತಿದೆ. ಸರ್ವರಿಗೂ ಅನ್ನ, ನೀರು, ಸೂರು, ಶಿಕ್ಷಣ, ಉದ್ಯೋಗ, ಆರೋಗ್ಯ ದೊರಕುವಂತಹ ಸಾಮಾಜಿಕ ವ್ಯವಸ್ಥೆಗಾಗಿ ಹೋರಾಡುತಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪುಷ್ಪಲತಾ, ಭುವನ್, ಸಚಿನ್, ಹೇಮಂತ್ ಇತರರು ಉಪಸ್ಥಿತರಿದ್ದರು.