
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರಿನ ಅರಸೀಕಟ್ಟೆ ಅಮ್ಮನವರ ದೇವಾಲಯದ ಹೇಮಾವತಿ ಸಭಾಂಗಣದ ಬಳಿ ಜನವರಿ 29ರ ಬುಧವಾರದಂದು ಸುಮಾರು 600 ಮಂದಿ 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಉಚಿತವಾಗಿ ಹೆಚ್ಪಿವಿ ಲಸಿಕೆ ನೀಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ. ಭಾರತೀ ರಾಜಶೇಖರ್ ಮತ್ತು ಡಾ. ಸಾವಿತ್ರಿ ತಿಳಿಸಿದರು.
ಹಾಸನ ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, “ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ, ಇನ್ನರ್ ವೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್, ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರ ಸಂಘ ಹಾಗೂ ಹೆಚ್ಡಿಆರ್ ಫೌಂಡೇಶನ್ ಬೆಂಗಳೂರು, ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ಹೆಣ್ಣುಮಕ್ಕಳಿಗೆ ಉಚಿತವಾಗಿ ಹೆಚ್ಪಿವಿ ಲಸಿಕೆ ನೀಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಭಾರತದಂತಹ ಕಡಿಮೆ ಮತ್ತು ಮಧ್ಯಮ ಆದಾಯ ಇರುವಂತಹ ದೇಶಗಳ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ಗೆ ಬಲಿಯಾಗುತ್ತಿದ್ದು, ವಿಶ್ವಾದ್ಯಂತ ಪ್ರತಿದಿನ 1500ಕ್ಕೂ ಅಧಿಕ ಸಾವನಪ್ಪುತ್ತಿದ್ದಾರೆ” ಎಂದರು.
“ಆರಂಭಿಕ ಹಂತದಿಂದ ಈ ಬಗ್ಗೆ ಗಮನ ಹರಿಸಿ ಚಿಕಿತ್ಸೆ ಪಡೆದುಕೊಂಡರೆ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಹುದು. ಈ ನಿಟ್ಟಿನಲ್ಲಿ ಅರಸೀಕಟ್ಟೆ ಅಮ್ಮನವರ ದೇವಾಲಯ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಎ ಟಿ ರಾಮಸ್ವಾಮಿಯವರ ದಿಟ್ಟ ನಿರ್ಧಾರದಿಂದಾಗಿ ಈಗಾಗಲೇ 200 ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, ಬುಧವಾರದಂದು 600 ಮಕ್ಕಳು ಉಚಿತವಾಗಿ ಲಸಿಕೆ ಪಡೆಯಲಿದ್ದಾರೆ” ಎಂದು ತಿಳಿಸಿದರು.
“ಈಗಾಗಲೇ ನೋಂದಾಯಿಸಿಕೊಂಡಿರುವವರಿಗೆ ಬುಧವಾರ ಬೆಳಿಗ್ಗೆ 7.30ಕ್ಕೆ ಅರಸೀಕಟ್ಟೆ ಅಮ್ಮನವರ ದೇವಾಲಯದ ಹೇಮಾವತಿ ಸಭಾಂಗಣದ ಬಳಿ ಚುಚ್ಚುಮದ್ದನ್ನು ನೀಡಲಾಗುತ್ತಿದ್ದು, ಮುಂದೆ ಚುಚ್ಚುಮದ್ದು ತೆಗೆದುಕೊಳ್ಳಲು ಇಚ್ಛಿಸುವ ಹೆಣ್ಣುಮಕ್ಕಳು ವಯಸ್ಸಿನ ದೃಢೀಕರಣ ದಾಖಲಾತಿಯೊಂದಿಗೆ ನೋಂದಾಯಿಸಿಕೊಳ್ಳಬಹುದು” ಎಂದು ಹೇಳಿದರು.
ರಂಗಕರ್ಮಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಪೂಜಾ ರಘುನಂದನ್ ಮಾತನಾಡಿ, “ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಇನ್ನರ್ ವೀಲ್ ಗೋಲ್ಡ್ ಸಂಸ್ಥೆಯು ಹೆಚ್ಪಿವಿ ಲಸಿಕಾ ಕಾರ್ಯವನ್ನು ಕೈಗೆತ್ತಿಕೊಂಡಿರುವುದು ಸಂತಸದ ಸಂಗತಿ. ಈ ಕಾರ್ಯಕ್ಕೆ ಕೈಜೋಡಿಸಿರುವ ಎ ಟಿ ರಾಮಸ್ವಾಮಿಯವರ ನಡೆ ಇತರ ಜನಪ್ರತಿನಿಧಿಗಳಿಗೂ ಮಾದರಿಯಾಗಿದ್ದು, ಅರಕಲಗೂಡು ಸುತ್ತಮುತ್ತಲಿನ ಹೆಣ್ಣುಮಕ್ಕಳು ಲಸಿಕೆ ಪಡೆಯುವ ಮೂಲಕ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ತಿಳಿಸಿದರು.
ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ. ಸಾವಿತ್ರಿ ಮಾತನಾಡಿ, “ಮಹಿಳೆಯರಿಗೆ ಗರ್ಭಕಂಠದ ಭಾಗದಲ್ಲಿ ಎದುರಾಗುವ ಕ್ಯಾನ್ಸರ್ ತೊಂದರೆ ಇದಾಗಿದೆ. ಇದು ಲೈಂಗಿಕವಾಗಿ ಹರಡಬಹುದಾದ ಸೋಂಕು ಎಂದೂ ಕೂಡ ಹೇಳಲಾಗುತ್ತದೆ. ಶೇ.80ರಷ್ಟು ಮಹಿಳೆಯರು ಹೆಚ್ಪಿವಿ ಸೋಂಕಿಗೆ ಗುರಿಯಾಗುತ್ತಿದ್ದಾರೆ. ಐದು ಪ್ರಕರಣಗಳಲ್ಲಿ ನಾಲ್ಕು ಪ್ರಕರಣಗಳು ಹೀಗೇ ಇರುತ್ತವೆಯೆಂದು ಸಂಶೋಧನೆ ಹೇಳುತ್ತದೆ. ಇದನ್ನು ತಡೆಗಟ್ಟಲು ಮಾರ್ಗೋಪಾಯಗಳಿದ್ದು, 9 ರಿಂದ 14 ವರ್ಷದ ಹೆಣ್ಣುಮಕ್ಕಳಿಗೆ ಹೆಚ್ಪಿವಿ ಲಸಿಕೆ ನೀಡಿ ಅವರನ್ನು ಗರ್ಭಕಂಠದ ಕ್ಯಾನ್ಸರ್ನಿಂದ ರಕ್ಷಣೆ ನೀಡಬಹುದಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ನರ್ಸಿಂಗ್ ಕಾಲೇಜು ಆವರಣದಲ್ಲಿ ಬೆಂಕಿ; ಕಾಲೇಜು ವಿದ್ಯಾರ್ಥಿಗಳಿಂದಲೇ ಕೃತ್ಯ ನಡೆದಿರುವ ಶಂಕೆ
“ಪ್ರೌಢಾವಸ್ಥೆಯ ಹುಡುಗಿಯರಿಗೆ ಆದಷ್ಟು ಬೇಗ ಲಸಿಕೆ ನೀಡಿದರೆ ಅವರಿಗೆ ಲೈಂಗಿಕ ಮೆಚ್ಯೂರಿಟಿ ಬರುವುದರೊಳಗೆ ರಕ್ಷಣೆ ನೀಡಿದಂತಾಗುತ್ತದೆ. ಈ ರೀತಿ ಮಾಡುವುದರಿಂದ ಗರ್ಭಕಂಠದ ಕ್ಯಾನ್ಸರ್ ಸಮಸ್ಯೆಯನ್ನು ಸುಲಭವಾಗಿ ತಡೆಯಬಹುದಾಗಿದ್ದು, ಸರ್ಕಾರವು ಪ್ರಸಕ್ತ ವರ್ಷದ ಬಜೆಟ್ನಲ್ಲಿ ಹೆಚ್ಪಿವಿ ಲಸಿಕೆಯನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಜೋಡಿಸಿಕೊಳ್ಳಬೇಕು” ಎಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಗಿರಿಜಾ, ಇನ್ನರ್ ವೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ ಅಧ್ಯಕ್ಷೆ ತನುಜಾ ಸೇರಿದಂತೆ ಇತರರು ಇದ್ದರು.