
‘ತಮಿಳುನಾಡು ಸರ್ಕಾರಕ್ಕೆ ತಾಕತ್ತಿದ್ದರೆ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ತಮಿಳು ಮಾಧ್ಯಮದಲ್ಲಿ ಮಾಡಿಸಲಿ’ ಎಂದು ಕೇಂದ್ರದ ಗೃಹ ಸಚಿವ ಅಮಿತ್ ಶಾ ಸವಾಲು ಹಾಕಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಕೆಲವು ಅಂಶಗಳ ವಿರುದ್ಧ ಹಾಗೂ ತ್ರಿಭಾಷಾ ನೀತಿಯ ವಿರುದ್ಧ ಧ್ವನಿ ಎತ್ತಿರುವ ತಮಿಳುನಾಡು ಸರ್ಕಾರಕ್ಕೆ ಹಾಕಿರುವ ಈ ಸವಾಲನ್ನು ಎಲ್ಲ ಹಿಂದಿಯೇತರ ಭಾಷಿಕರೂ ಸ್ವೀಕರಿಸಲೇಬೇಕು. ದ್ವಿಭಾಷಾ ನೀತಿಯ ಪರವಾಗಿ ಕರ್ನಾಟಕದಲ್ಲಿ ಕೂಡ ಸಾಕಷ್ಟು ಚರ್ಚೆ ಆರಂಭವಾಗಿದ್ದು, ಹಿಂದಿಯ ವಿರುದ್ಧದ ಹೋರಾಟದಲ್ಲಿ ಇಂಗ್ಲಿಷ್ ಭಾಷೆಯಿಂದ ದೇಶದ ಭಾಷೆಗಳಿಗೆ ಆಗುತ್ತಿರುವ ಹಾನಿಯ ಬಗ್ಗೆ ನಾವು ಎಚ್ಚರ ತಪ್ಪಬಾರದು.
ಕನಿಷ್ಠ ಪ್ರಾಥಮಿಕ ಶಿಕ್ಷಣವಾದರೂ ಮಾತೃ ಭಾಷೆ ಅಥವಾ ಪರಿಸರದ ಭಾಷೆಯಲ್ಲಿ ಆಗಬೇಕೆಂದು ಎಷ್ಟೇ ಹೋರಾಟಗಳು ನಡೆದರೂ, ಸಾಹಿತ್ಯ ಸಮ್ಮೇಳನಗಳಲ್ಲಿ ನಿರ್ಣಯಗಳು ಆಗುತ್ತಿದ್ದರೂ, ಇಂಗ್ಲಿಷ್ ಮಾಧ್ಯಮದ ಪ್ರವಾಹದಲ್ಲಿ ದೇಶದ ಭಾಷೆಗಳು ಕೊಚ್ಚಿ ಹೋಗುತ್ತಿರುವುದನ್ನು ಕಂಡು ನಾವೆಲ್ಲ ಅಸಹಾಯಕರಾಗಿ ನೋಡುತ್ತಾ ನಿಲ್ಲುವ ಪರಿಸ್ಥಿತಿ ಬಂದಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ತನ್ನ ಮಗುವನ್ನು ಕೆಲವೇ ವರ್ಷಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸುವ ಒಬ್ಬನೇ ಪೋಷಕ ಕೂಡ ಸಿಗಲಾರ. ಕನ್ನಡ ಮಾಧ್ಯಮದ ಪರವಾಗಿ ಹೋರಾಟ ಇರಲಿ; ಮಾತನಾಡುವವರನ್ನು ಕೂಡ ಅಪಹಾಸ್ಯ ಮಾಡುವ ಸ್ಥಿತಿ ಈಗಾಗಲೇ ನಿರ್ಮಾಣ ಆಗಿದೆ.
ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಮಾತ್ರವಲ್ಲದೆ, ಕೃಷಿ, ತೋಟಗಾರಿಕೆ, ಪಶು ವೈದ್ಯಕೀಯ, ಕಾನೂನು, ವಾಣಿಜ್ಯಶಾಸ್ತ್ರ ಹೀಗೆ ಬಹುತೇಕ ಎಲ್ಲ ಉನ್ನತ ವ್ಯಾಸಂಗ ವ್ಯವಸ್ಥೆ ಇಂಗ್ಲಿಷ್ ನಲ್ಲಿ ಇರುವುದರಿಂದ, ಸಹಜವಾಗಿ ಪೋಷಕರು ಭವಿಷ್ಯದಲ್ಲಿ ತಮ್ಮ ಮಕ್ಕಳು ಕಷ್ಟಕ್ಕೆ ಸಿಲುಕಬಾರದೆಂದು ಪ್ರಾಥಮಿಕ ಹಂತದಲ್ಲಿಯೇ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಸೇರಿಸುವ ನಿರ್ಧಾರಕ್ಕೆ ಬರುವುದು ತಪ್ಪೆಂದು ಹೇಳಲು ಸಾಧ್ಯವೇ ಇಲ್ಲ. ಇಂತಹ ಸನ್ನಿವೇಶದಲ್ಲಿ ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಇರಬೇಕೆಂದು ಹೇಳುವುದು ಕೇವಲ ಭಾವನಾತ್ಮಕ ಸಂಗತಿ ಆಗುತ್ತದೆಯೇ ಹೊರತು ವಾಸ್ತವಕ್ಕೆ ಹತ್ತಿರ ಅನಿಸುವುದಿಲ್ಲ. ಹಾಗಾಗಿ ಕನ್ನಡ ಸೇರಿದಂತೆ ದೇಶದ ಭಾಷೆಗಳು ಉಳಿಯಬೇಕಿದ್ದರೆ ,ಉನ್ನತ ಶಿಕ್ಷಣ ದೇಶದ ಭಾಷೆಗಳಲ್ಲಿ ಆಗಲೇಬೇಕು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರ ಹೇಳಿಕೆಯನ್ನು ನಮ್ಮ ರಾಜ್ಯ ಸರ್ಕಾರ, ಕನ್ನಡಪರ ಹೋರಾಟಗಾರರು ಹಾಗೂ ಕನ್ನಡದ ಸಾಹಿತಿಗಳು ಸಕಾರಾತ್ಮಕವಾಗಿ ಸ್ವೀಕರಿಸಲೇಬೇಕು. ಉನ್ನತ ಶಿಕ್ಷಣವನ್ನು ದೇಶದ ಭಾಷೆಗಳಲ್ಲಿ ನೀಡಲು ಸಾಧ್ಯ ಇಲ್ಲ ಎನ್ನುವುದಾದರೆ, ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಇರಬೇಕೆಂದು ಭಾಷಣ ಮಾಡುವುದು ಹಾಗೂ ಸಮ್ಮೇಳನಗಳಲ್ಲಿ ಠರಾವು ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ.
ಸರ್ಕಾರ ನಡೆಸುವವರು ಮತ್ತು ಕನ್ನಡಪರ ಚಿಂತಕರು ಪ್ರಪಂಚದ ಎಲ್ಲ ದೇಶಗಳಲ್ಲಿ ಉನ್ನತ ಶಿಕ್ಷಣವು ಇಂಗ್ಲಿಷ್ ಮಾಧ್ಯಮದ ಮೂಲಕ ನಡೆಯುತ್ತಿದೆಯೋ ಅಥವಾ ಬೇರೆ ಭಾಷೆಗಳಲ್ಲಿ ಕೂಡ ನಡೆಯುತ್ತಿದೆಯೋ ಎಂಬುದನ್ನು ಅಧ್ಯಯನ ಮಾಡಬೇಕು. ನನ್ನ ತಿಳುವಳಿಕೆಯ ಪ್ರಕಾರ ಜಪಾನ್, ಜರ್ಮನಿ, ಫ್ರಾನ್ಸ್, ಚೀನಾ, ರಷ್ಯಾ ಹೀಗೆ ಹಲವು ರಾಷ್ಟ್ರಗಳಲ್ಲಿ ಪ್ರಾಥಮಿಕದಿಂದ ಹಿಡಿದು ಉನ್ನತ ಶಿಕ್ಷಣವು ಕೂಡ ಆಯಾ ದೇಶಗಳ ಭಾಷೆಯಲ್ಲಿಯೇ ನಡೆಯುತ್ತದೆ. ಇಂಗ್ಲಿಷರು ಆಳ್ವಿಕೆ ನಡೆಸಿದ ವಸಾಹತುಶಾಹಿ ದೇಶಗಳಲ್ಲಿ ಮಾತ್ರ ಉನ್ನತ ಶಿಕ್ಷಣದ ವ್ಯವಸ್ಥೆಯಲ್ಲಿ ಇಂಗ್ಲಿಷ್ ಮಾಧ್ಯಮ ಇದೆ. ಜಪಾನ್, ಜರ್ಮನಿ, ಫ್ರಾನ್ಸ್, ಚೀನಾ, ರಷ್ಯಾಗಳಲ್ಲಿ ಸಾಧ್ಯ ಆಗಿರುವುದು, ಶ್ರೀಮಂತ ಇತಿಹಾಸ ಇರುವ ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಉರ್ದು ಭಾಷೆಗಳಲ್ಲಿ ಸಾಧ್ಯವಿಲ್ಲವೇ?
ಕನ್ನಡ ಮಾಧ್ಯಮದ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಶಿಕ್ಷಣ ಕಾಲೇಜುಗಳನ್ನು ಆರಂಭಿಸಬೇಕೆಂದು ಯು.ಆರ್. ಅನಂತಮೂರ್ತಿಯವರು ಬಹಳ ವರ್ಷಗಳ ಹಿಂದೆಯೇ ಸಲಹೆ ನೀಡಿದ್ದರು. ಇಂತಹ ಚರ್ಚೆ ಕೆಲ ವರ್ಷಗಳ ಹಿಂದೆ ರಾಜ್ಯ ಸರ್ಕಾರದಿಂದಲೂ ನಡೆದಿತ್ತು.
ವಿಶ್ವಮಟ್ಟದ ಸಾಹಿತ್ಯ ದೇಶದ ಜನಭಾಷೆಗಳಲ್ಲಿ ಸೃಷ್ಟಿ ಆಗಿರುವುದು ಎಲ್ಲರಿಗೂ ಗೊತ್ತು. ಆದರೆ ವಿಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಭಾರತೀಯರು ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯ ಆಗದಿರುವುದಕ್ಕೆ ಮುಖ್ಯ ಕಾರಣ ನಾವು ಉನ್ನತ ಶಿಕ್ಷಣಕ್ಕೆ ಇಂಗ್ಲಿಷ್ ಮಾಧ್ಯಮದ ಮೊರೆ ಹೋಗಿರುವುದೇ ಆಗಿದೆ. ಭಾರತಕ್ಕೆ ನೊಬೆಲ್ ಪ್ರಶಸ್ತಿಗಳು ಹೆಚ್ಚು ಬಾರದಿರುವುದಕ್ಕೆ ಇದೇ ಮುಖ್ಯ ಕಾರಣ ಎಂದು ಡಾ. ರಾಮ ಮನೋಹರ ಲೋಹಿಯಾ ಅವರು ಬಹಳ ವರ್ಷಗಳ ಹಿಂದೆಯೇ ಹೇಳಿ ಹೋಗಿದ್ದಾರೆ.
‘ಮಾತೃಭಾಷೆ ಅಥವಾ ನಮ್ಮ ಪರಿಸರದ ಭಾಷೆಯು ನಮ್ಮ ಶಕ್ತಿ, ಪರಭಾಷೆ ನಮ್ಮ ದೌರ್ಬಲ್ಯ’
ಕನ್ನಡಿಗರು ಇಂಗ್ಲಿಷರನ್ನು ಇಂಗ್ಲಿಷ್ ಮೂಲಕ,ಜರ್ಮನ್ ರನ್ನು ಜರ್ಮನಿ ಭಾಷೆಯ ಮೂಲಕ, ಜಪಾನೀಯರನ್ನು ಜಪಾನಿ ಭಾಷೆಯ ಮೂಲಕ ಮಾತ್ರವಲ್ಲ; ತಮಿಳರನ್ನು ತಮಿಳು ಮೂಲಕ, ತೆಲುಗರನ್ನು ತೆಲುಗು ಮೂಲಕ ಎದುರಿಸಿ ಗೆಲ್ಲಲು ಸಾಧ್ಯವೇ ಇಲ್ಲ ಎಂಬ ಸರಳ ಸತ್ಯವನ್ನೂ ನಾವು ಅರ್ಥ ಮಾಡಿಕೊಂಡಿಲ್ಲ ಎಂದು ಬಹಳ ವಿಷಾದದಿಂದ ಹೇಳಬೇಕಾಗುತ್ತದೆ. ಕುವೆಂಪು, ಬೇಂದ್ರೆ, ಕಾರಂತರು ಇಂಗ್ಲಿಷ್ ಮೂಲಕ ವಿಶ್ವ ಮಟ್ಟದ ಸಾಹಿತ್ಯ ಸೃಷ್ಟಿಸಲು ಸಾಧ್ಯ ಇತ್ತೆ? ಈ ಸರಳ ಸತ್ಯ ವಿಜ್ಞಾನ ಮತ್ತು ಇತರ ಎಲ್ಲ ಜ್ಞಾನ ಶಾಖೆಗಳಿಗೂ ಅನ್ವಯ ಆಗುತ್ತದೆಯಲ್ಲವೇ?
ನಾವು ವಿಳಂಬ ಮಾಡಿದಷ್ಟೂ ನಮ್ಮಭಾಷೆಗೂ ನಮ್ಮ ಮಕ್ಕಳಿಗೂ ಹಾನಿ ಮಾಡುತ್ತಲೇ ಇರುತ್ತೇವೆ. ಇರುವ ಕೆಲವು ಕಾಲೇಜುಗಳಲ್ಲಾದರೂ ವೈದ್ಯಕೀಯ, ಇಂಜಿನಿಯರಿಂಗ್ ಕೃಷಿವಿಜ್ಞಾನ, ಕಾನೂನು, ವಾಣಿಜ್ಯ ಮುಂತಾಗಿ ಎಲ್ಲ ಶಾಖೆಗಳ ಉನ್ನತ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿ ನೀಡುವ ದೃಢ ನಿರ್ಧಾರ ಮಾಡಲೇಬೇಕು. ಆರಂಭದಲ್ಲಿ ಸ್ವಲ್ಪ ಕಷ್ಟ ಆಗಬಹುದು; ಅನುವಾದದ ಸಂದರ್ಭದಲ್ಲಿ ಪಾರಿಭಾಷಿಕ ಶಬ್ದಗಳನ್ನು ಜನಭಾಷೆಗಳಿಗೆ ಹತ್ತಿರದ ಶಬ್ಧ ಸಿಗದಿದ್ದರೆ ಹಾಗೆಯೇ ಉಳಿಸಿಕೊಂಡರೆ ತಪ್ಪೇನೂ ಇಲ್ಲ. ಇಂಜಿನಿಯರ್ ಬದಲು ಅಭಿಯಂತರು ಎಂದು ಜನಸಾಮಾನ್ಯರಿಗೆ ಅರ್ಥವಾಗದ ಪದಬಳಸುವ ಮೂರ್ಖ ಕೆಲಸವನ್ನು ಖಂಡಿತಾ ಮಾಡಬಾರದು.
ವೈದ್ಯಕೀಯ ಇಂಜಿನಿಯರಿಂಗ್ ಸೇರಿದಂತೆ ಎಲ್ಲಾ ಉನ್ನತ ಶಿಕ್ಷಣ ನೀಡುವ ಕಾಲೇಜುಗಳಲ್ಲಿ ಹಾಗು ರಾಜ್ಯಸರ್ಕಾರದ ಎಲ್ಲ ಉದ್ಯೋಗಗಳಲ್ಲಿ ಎಸ್ಎಸ್ಎಲ್ಸಿ ತನಕ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ. 25 ಸ್ಥಾನಗಳನ್ನು ಮೀಸಲಿಡಲು, ರಾಜ್ಯದಲ್ಲಿ ಸ್ಥಾಪನೆ ಆಗಲಿರುವ ಉದ್ಯಮಗಳಲ್ಲಿ ಶೇಕಡ 50ರಷ್ಟು ಸ್ಥಾನವನ್ನು ಪ್ರೌಢಶಾಲೆ ತನಕ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳಿಗೆ ಮೀಸಲಿಡಲು ನಾವು ಕಾನೂನು ಮಾಡಿ, ಅಕ್ಷರಷಃ ಜಾರಿ ಮಾಡಲು ಹೊರಟರೆ ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸುವುದಿಲ್ಲ ಅನ್ನುತ್ತಾರೆಯೇ?
ಡಾ.ಚಂದ್ರಶೇಖರ ಕಂಬಾರ ಅವರು ಹೇಳಿರುವ ಮಾತು ನನ್ನನ್ನು ಬಹಳವಾಗಿ ಕಾಡುತ್ತಿದೆ. "ಗ್ರೀಕರ ವೀರನಾದ ಹರ್ಕ್ಯುಲಸ್ ಮತ್ತಿನಲ್ಲಿದ್ದಾಗ ತನ್ನ ತಂದೆ ತಾಯಿಯನ್ನು ಕೊಂದು ಹಾಕಿದನಂತೆ. ಮತ್ತು ಇಳಿದಾಗ, ತಾನು ಎಸಗಿದ ಪಾಪಕೃತ್ಯಕ್ಕೆ ಮರುಗಿದನಂತೆ". ಇಂಗ್ಲಿಷಿನ ಮತ್ತಿನಲ್ಲಿರುವ ನಾವು ತಾಯಿ ಭಾಷೆಯನ್ನೇ ಕೊಲ್ಲುವ ಪಾಪ ಕೃತ್ಯಕ್ಕೆ ಇಳಿಯದಿರೋಣ..
- ಆರ್. ಪಿ. ವೆಂಕಟೇಶ ಮೂರ್ತಿ, ಹಾಸನ
9448407561