
ನಮ್ಮ ಮೆಟ್ರೋ ಪ್ರಯಾಣ ದರದಲ್ಲಿ ಅಸಹಜ ಹೆಚ್ಚಳವಾಗಿರುವ ಕಡೆ ದರ ಕಡಿತ ಮಾಡುವಂತೆ ಬಿಎಂಆರ್ಸಿಎಲ್ ಎಂಡಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
“ಬಿಎಂಆರ್ಸಿಎಲ್ ಜಾರಿಗೊಳಿಸಿರುವ ಬೆಂಗಳೂರು ಮೆಟ್ರೋ ದರ ಪರಿಷ್ಕರಣೆ ವೈಪರೀತ್ಯದಿಂದ ಕೂಡಿದೆ. ಕೆಲವು ಮಾರ್ಗಗಳಲ್ಲಿ ದುಪ್ಪಟ್ಟು ದರ ನಿಗದಿಪಡಿಸಲಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಅಸಹಜವಾಗಿ ದುಪ್ಪಟ್ಟು ದರ ನಿಗದಿಯಾಗಿರುವ ಕಡೆ ದರಕಡಿತ ಮಾಡುವಂತೆ ಬಿಎಂಆರ್ಸಿಎಲ್ ಎಂಡಿಗೆ ಸಿಎಂ ಸೂಚನೆ ನೀಡಿ, ಪ್ರಯಾಣಿಕರ ಹಿತರಕ್ಷಣೆ ಕಾಪಾಡಬೇಕು” ಎಂದು ತಿಳಿಸಿದ್ದಾರೆ.
ಫೆಬ್ರವರಿ 9ರಂದು ಬಿಎಂಆರ್ಸಿಎಲ್ ನಮ್ಮ ಮೆಟ್ರೋ ಪ್ರಯಾಣ ದರ ಪರಿಷ್ಕರಿಸಿತ್ತು. ರಿಯಾಯಿತಿ ಮುನ್ನ ಟಿಕೆಟ್ ದರದಲ್ಲಿ ಸರಾಸರಿ ಶೇ.51.55ರಷ್ಟು ಹೆಚ್ಚಳ ಮಾಡಿದ್ದರೆ, ರಿಯಾಯಿತಿ ನಂತರದ ಟಿಕೆಟ್ ದರದಲ್ಲಿ ಶೇ.45-46ರಷ್ಟು ಹೆಚ್ಚಳ ಮಾಡಲಾಗಿತ್ತು. ಆದರೆ, ಹಲವು ಪ್ರಯಾಣಿಕರು ಅನೇಕ ಮಾರ್ಗಗಳ ಟಿಕೆಟ್ ದರದಲ್ಲಿ ಶೇ.100ರವರೆಗೂ ಹೆಚ್ಚಳವಾಗಿರುವುದಾಗಿ ದೂರಿದ್ದರು. ದರ ಏರಿಕೆಯಿಂದ ನಿತ್ಯ ಪ್ರಯಾಣಿಸುವವರು, ವಿದ್ಯಾರ್ಥಿಗಳು ಬೆಲೆ ತೆರಬೇಕಾಗುತ್ತಿದೆ ಎಂದು ಪ್ರಯಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ ದಿನದ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಕಂಡಿದೆ.
ಕೆಲ ತಾಂತ್ರಿಕ ದೋಷದಿಂದ ಈ ರೀತಿ ಕೆಲ ಮಾರ್ಗಗಳಲ್ಲಿ ಅಸಹಜ ಟಿಕೆಟ್ ದರ ಏರಿಕೆಯಾಗಿರುವುದಾಗಿ ಹೇಳಲಾಗಿದೆ. ಈಗಾಗಲೇ ಮೆಟ್ರೋ ದರ ಏರಿಕೆ ಸಂಬಂಧ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಪರಸ್ಪರ ಬೊಟ್ಟು ಮಾಡುತ್ತಿವೆ. ಇದು ರಾಜ್ಯ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮಧ್ಯೆ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಈ ಮಧ್ಯೆ ಮೆಟ್ರೋ ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಸಿಎಂ, ಇದೀಗ ಅಸಹಜ ದರ ಏರಿಕೆಯಾಗಿರುವ ಮಾರ್ಗಗಳಲ್ಲಿ ಕೂಡಲೇ ದರ ಕಡಿತಗೊಳಿಸಲು ಸೂಚಿಸಿದ್ದಾರೆ.
ಮೆಟ್ರೋ ರೈಲಿನ ಪ್ರಯಾಣ ದರ ಹೆಚ್ಚಳವನ್ನು ಕೇಂದ್ರ ಸರ್ಕಾರ ನೇಮಿಸಿದ ಸಮಿತಿ ನಿಗದಿಪಡಿಸಿದೆಯೇ ಹೊರತು ರಾಜ್ಯ ಸರ್ಕಾರವಲ್ಲ ಎಂದು ಸಿಎಂ ಸಿದ್ದರಾಮಯ್ಯ ಎರಡು ದಿನಗಳ ಹಿಂದೆಯಷ್ಟೇ ಸ್ಪಷ್ಟಪಡಿಸಿದ್ದರು.