ಪಕ್ಷ ಭೇದ ಮರೆತು ಪ್ರಾಮಾಣಿಕವಾಗಿ ನಿಮ್ಮ ಜತೆಗೆ ನಿಂತು ಹಾಸನ ವಿವಿ ಉಳಿಸುವ ಕೆಲಸವನ್ನು ಮಾಡಲಾಗುವುದು. ಇದರಲ್ಲಿ ಯಾವುದೇ ರೀತಿಯ ಅನುಮಾನ ಬೇಡ. ಎಲ್ಲ ಶಾಸಕರು ಒಟ್ಟುಗೂಡಿ, ಹಾಸನ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯ ತಂಡದ ನಿಯೋಗ ಈ ವಾರದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಸಂಸದ ಶ್ರೇಯಸ್ ಎಂ ಪಟೇಲ್ ಭರವಸೆ ನೀಡಿದರು.
ನಗರದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಹಾಸನ ವಿಶ್ವವಿದ್ಯಾಲಯ ಉಳಿಸಿ ಬೆಳೆಸಲು ಭಾನುವಾರ ಕರೆಯಲಾಗಿದ್ದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, “ಅವರು ವಿಶ್ವ ವಿದ್ಯಾಲಯದ ಕುರಿತು ದುಂಡು ಮೇಜಿನ ಸಭೆಯಲ್ಲಿ ಮೌಲ್ಯಾಧಾರಿತ ಚರ್ಚೆಗಳು ನಡೆದಿದ್ದು, ಜಿಲ್ಲೆಯ ಅಭಿವೃದ್ಧಿ ಪ್ರಶ್ನೆ ಬಂದಾಗ ಪಕ್ಷ ಮರೆತು ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕಾಗುತ್ತದೆ. ಜನರ ಪರ ನಿಂತುಕೊಳ್ಳುವ ಕೆಲಸ ಮಾಡಲಾಗುವುದು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಜತೆ ಮಾತನಾಡಲಾಗುವುದು. ಸಮಿತಿ ವರದಿ ಕೂಡ ಈವರೆಗೂ ಬಂದಿರುವುದಿಲ್ಲ. ವಿಶ್ವವಿದ್ಯಾಲಯವನ್ನು ಮುಚ್ಚುವ ನಿರ್ಧಾರವನ್ನು ಈವರೆಗೂ ತೆಗೆದುಕೊಂಡಿರುವುದಿಲ್ಲ. ಯಾರೂ ಕೂಡಾ ಗಾಬರಿ ಪಡಬಾರದು. ಹಾಸನ ವಿಶ್ವವಿದ್ಯಾಲಯ ಉಳಿಸುವ ಹೋರಾಟದಲ್ಲಿ ನಾನು ಇರುತ್ತೇನೆ. ಪಕ್ಷ ಭೇದ ಮರೆತು ಪ್ರಾಮಾಣಿಕವಾಗಿ ನಿಮ್ಮ ಜೊತೆಯಿರುತ್ತೇನೆ. ಎಲ್ಲರೂ ಸೇರಿ ಹಾಸನ ವಿವಿ ಉಳಿಸುವ ಕೆಲಸವನ್ನು ಮಾಡೋಣ” ಎಂದರು.

ಶಾಸಕ ಎ ಮಂಜು ಮಾತನಾಡಿ, “ವಿಶ್ವವಿದ್ಯಾಲಯವನ್ನು ಇಲ್ಲಿಯೇ ಉಳಿಸುವ ನಿಟ್ಟಿನಲ್ಲಿ ಆಗಬೇಕಾದ ಕೆಲಸ ತಡವಾಗಿದೆ ಎಂಬುದು ನನ್ನ ಭಾವನೆ. ಯಾವುದೇ ಸರ್ಕಾರ ಬಂದರೂ ಕಾಲೇಜುಗಳನ್ನು ಮುಚ್ಚುವುದಕ್ಕೆ ಆಗುವುದಿಲ್ಲ. ಆದರೆ ವಿಲೀನಗೊಳಿಸಲಾಗುತ್ತದೆ. ಕಾಲೇಜು ಇಲ್ಲೇ ಇದಿಯಲ್ಲ ಎಂದು ಉತ್ತರ ಹೇಳುವುದಕ್ಕೆ ತಯಾರು ಮಾಡಿಕೊಳ್ಳುತ್ತಾರೆ. ನಾನು ಶಾಸಕನಾಗಿದ್ದಾಗ ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿ ಹಾಸನದಲ್ಲಿ ಪ್ರಾರಂಭವಾಯಿತು. ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದು ಆ ಜಿಲ್ಲೆಗಳಿಗೆ ಹೆಚ್ಚು ಗೌರವ ತರುವ ಕೆಲಸ. ಹಳ್ಳಿ ಸೇರಿದಂತೆ ಎಲ್ಲ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗಬೇಕಾದರೆ ಆಯಾ ಜಿಲ್ಲೆಯಲ್ಲೇ ವಿವಿಗಳು ಇರಬೇಕು. ಆಗ ಮಾತ್ರ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ವಿವಿಯನ್ನು ಮುಚ್ಚುವ ಬದಲಿಗೆ ವಿಶ್ವವಿದ್ಯಾಲಯದ ಅಭಿವೃದ್ಧಿ ಆಗಬೇಕು” ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್ ಎಲ್ ಮಲ್ಲೇಶ್ ಗೌಡ ಮಾತನಾಡಿ, “ವಿದ್ಯಾರ್ಥಿಗಳ ಮೊದಲ ಆಯ್ಕೆ ಸರ್ಕಾರಿ ಶಿಕ್ಷಣ ಸಂಸ್ಥೆಗಳು. ಎಂಜಿನಿಯರ್, ವೈದ್ಯಕೀಯ ಯಾವುದೇ ಉನ್ನತ ಶಿಕ್ಷಣ ಆಗಿರಲಿ ಸರ್ಕಾರಿ ಸಂಸ್ಥೆಗಳಿಗೆ ಬರಲು ಮುಂದಾಗುತ್ತಾರೆ. ಸೀಟು ಇಲ್ಲದಾಗ ಅನಿವಾರ್ಯವಾಗಿ ಖಾಸಗಿ ಕಡೆ ಹೋಗುತ್ತಾರೆ. ಸರ್ಕಾರಗಳು ಇರುವ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಮುಂದಾದರೆ ಮುಂದಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯವರು ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮುಂದಾಗುತ್ತಾರೆ. ಆಗ ಖಾಸಗಿಯವರು ಮಾಡಿದ ನಿರ್ಣಯದಂತೆ ಉನ್ನತ ಶಿಕ್ಷಣ ಸಾಗುತ್ತದೆ” ಎಂದು ಎಚ್ಚರಿಸಿದರು.

“ಖಾಸಗಿಯವರ ಯಾವ ಯಾವ ಉನ್ನತ ಶಿಕ್ಷಣ ಸಂಸ್ಥೆಗಳು ಯಾವ ಯಾವ ಮೌಲ್ಯವನ್ನು ಬಿತ್ತಬಹುದು. ಸರ್ಕಾರದವರು ಹೀಗೇ ಮುಂದುವರೆದರೆ ಬಂಡವಾಳ ಶಾಹಿಗಳು ತಮಗೆ ಬೇಕಾದ ಮೌಲ್ಯಗಳನ್ನು ಯುವ ತಲೆಮಾರಿಗೆ ಬಿತ್ತುತ್ತಾರೆ. ಇದು ಉನ್ನತ ಶಿಕ್ಷಣದ ದೊಡ್ಡ ದುರಂತದ ಸಂಗತಿ ಆಗುತ್ತದೆ. ಈ ಹಿನ್ನಲೆಯಲ್ಲಿ ಸರ್ಕಾರಿ ಸಂಸ್ಥೆಯನ್ನು ಅನಿವಾರ್ಯವಾಗಿ ಉಳಿಸಬೇಕು. ವಿಶ್ವವಿದ್ಯಾನಿಲಯದ ಸಂಖ್ಯೆ ಹೆಚ್ಚು ಇರಬೇಕು. ಸ್ಥಾಪನೆ ಮಾಡಿರುವ ವಿಶ್ವವಿದ್ಯಾಲಯವನ್ನು ಗಟ್ಟಿಗೊಳಿಸಬೇಕೇ ಹೊರತು ಮುಚ್ಚುವಂತದ್ದು ಈ ವಲಯಕ್ಕೆ ಮಾಡುವ ಅನ್ಯಾಯ. ಗ್ರಾಮಾಂತರ ಪ್ರದೇಶಕ್ಕೆ ಮಾಡುವ ದ್ರೋಹ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಸನ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷರಾದ ಡಾ. ವೈ ಎಸ್ ವೀರಭದ್ರಪ್ಪ, ಆರ್ ಪಿ ವೆಂಕಟೇಶ್ ಮೂರ್ತಿ, ಧರ್ಮೇಶ್, ಹೆಚ್ ಕೆ ಸಂದೇಶ್, ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಬಿ ಕೆ ಮಂಜುನಾಥ್, ಹೆಚ್ ಪಿ ಮೋಹನ್, ಹಿರಿಯ ಪತ್ರಕರ್ತ ವೆಂಕಟೇಶ್, ಹೆಚ್ ಆರ್ ನವೀನ್ ಕುಮಾರ್, ಎಂ ಜಿ ಪೃಥ್ವಿ, ಸಾಹಿತಿ ರೂಪ ಹಾಸನ್, ಜ ನಾ ತೇಜಶ್ರೀ, ತಾರಾಚಂದನ್, ರಮೇಶ್, ಎಂ ಬಿ ಪುಷ್ಪ, ಸಮೀರ್, ಅಹಮದ್ ಹಗರೆ, ಸುಭಾಷ್ ಸೇರಿದಂತೆ ಇತರರು ಇದ್ದರು.