
ಹಾಸನ ನಗರದ ಹಲವೆಡೆ ಇರುವ ಜಾಗ ಕಬಳಿಸಲು ಮುಂದಾಗಿದ್ದು, ದೊಡ್ಡಕೊಂಡಗುಳ ಗ್ರಾಮದ ಬಳಿ ಅಧಿಕಾರಿಗಳೇ ಕೈಬರಹದ ಪಹಣಿ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಬೆಲೆಬಾಳುವ 97 ಎಕರೆ ಭೂಮಿಯನ್ನು ಕಬಳಿಸುವ ಹುನ್ನಾರ ನಡೆದಿದ್ದು, ಇದ್ದರಲ್ಲಿ ಪ್ರಭಾವಿ ರಾಜಕಾರಣಿಗಳ ಕೈವಾಡವಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್ ಡಿ ರೇವಣ್ಣ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾಧ್ಯಮದೊಂದಿಗೆ ಮಾತನಾಡಿ, “ಭೂಮಿ ಕಬಳಿಕೆಯ ಬಗ್ಗೆ ಹಾಸನ ಜಿಲ್ಲಾಡಳಿತ ಗಮನಹರಿಸಬೇಕು. ಸರ್ಕಾರವೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.
“ಕಂದಾಯ ಅಧಿಕಾರಿಗಳು ಹಾಗೂ ಕೆಲ ಪ್ರಭಾವಿಗಳು ಸೇರಿ ನಗರ ಪ್ರದೇಶದ ಸರ್ಕಾರಿ ಜಾಗದ ದಾಖಲೆ ತಿದ್ದಿದ್ದಾರೆ. ದೊಡ್ಡಕೊಂಡಗುಳ ಗ್ರಾಮದ ಸರ್ವೇ ನಂಬರ್ 7, 32, 34, 54ರಲ್ಲಿನ 97 ಎಕರೆ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದ್ದು, ಮಂಜೂರಾತಿ ದಾಖಲೆಗಳೇ ಇಲ್ಲದೆ ಕೆಲವರ ಹೆಸರಿಗೆ ಮಂಜೂರು ಮಾಡಿ ಕೈ ಬರಹದ ಪಹಣಿ ಸೃಷ್ಟಿಸಿ ಹಗರಣ ಮಾಡಲಾಗಿದೆ” ಎಂದು ಆರೋಪಿಸಿದರು.
“ಸುಮಾರು ₹500 ಕೋಟಿ ಮೌಲ್ಯದ ಜಮೀನು ದುರ್ಬಳಕೆಯಾಗಿದ್ದು, ಯಾವುದೇ ಮೂಲ ದಾಖಲೆಗಳಿಲ್ಲದೆ ಯಾರೊಬ್ಬರೂ ಸಾಗುವಳಿಯಲ್ಲಿ ಇಲ್ಲದಿದ್ದರೂ ಕೇವಲ ಹೆಸರುಗಳನ್ನು ನಮೂದಿಸಿ ತಲಾ ಒಬ್ಬೊಬ್ಬರಿಗೆ 1-2 ಎಕರೆಯಂತೆ ಹಂಚಿಕೆ ಮಾಡಲಾಗಿದೆ. ತಾಲೂಕು ಕಚೇರಿಯಲ್ಲಿ ಪ್ರಸ್ತುತ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಹಾಗೂ ಈ ಹಿಂದೆ ರೆಕಾರ್ಡ್ ರೂಮ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚನ್ನಕೇಶವ ಮತ್ತು ಗ್ರಾಮಲೆಕ್ಕಿಗ ವಿಶ್ವನಾಥ್ ಇಬ್ಬರೂ ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಕಡತಗಳ ಒಳಗೆ ಸೇರಿಸಿದ್ದಾರೆ. ಗೋಮಾಳ ಜಮೀನಿನಲ್ಲಿ ಬಡಾವಣೆ ಮಾಡಲಾಗುತ್ತಿದೆ” ಎಂದು ಗಂಭೀರವಾಗಿ ಆರೋಪಿಸಿದರು.
“ಕೆಲ ಪ್ರಭಾವಿ ರಾಜಕಾರಣಿಗಳು ಹಾಗೂ ಭೂಮಾಫಿಯಾದವರು ಸೇರಿ ಬಡಾವಣೆ ನಿರ್ಮಾಣ ಮಾಡುತ್ತಿದ್ದು, ನಕಲಿ ದಾಖಲೆ ಸೃಷ್ಟಿ ಮಾಡಿದವರ ವಿರುದ್ದ ಡಿಸಿ ಕ್ರಮ ಕೈಗೊಂಡು ಈ 97 ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು” ಎಂದು ಆಗ್ರಹಿಸಿದರು.
“ಹಾಸನ ಜಿಲ್ಲಾಧಿಕಾರಿ ಕೆಲಸ ಮಾಡುವುದರಲ್ಲಿ ನಂಬರ್ ಒನ್. ಎಂಥದ್ದೂ ಬೇಕಾದರೂ ಸೃಷ್ಟಿಸಬಹುದು, ಮುಚ್ಚಿ ಹಾಕಲೂಬಹುದೆಂದು ಅವಾರ್ಡ್ ಕೊಟ್ಟಿದ್ದಾರೆ. ಈ ಗೋಮಾಳ ಭೂಮಿ ಅಕ್ರಮ ಮಂಜುರಾತಿ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ. ಈ ಬಗ್ಗೆ ಸದನದಲ್ಲಿ ಕೂಡ ಮಾತನಾಡಿದ್ದೇವೆ. ಸಾಗುವಳಿ ಚೀಟಿ ಇದ್ದರೆ, ಮಂಜೂರಾತಿ ದಾಖಲೆ ಇದ್ದರೆ ಭೂಮಿ ಕೊಡಲಿ. ಆದರೆ ಈ ಯಾವುದೇ ದಾಖಲೆಪತ್ರ ಇಲ್ಲದೆ ಭೂಮಿ ಪರಭಾರೆ ಮಾಡಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಅಧಿಕಾರಿಗಳೇ ಕೈ ಪಹಣಿ ರಚಿಸಿ ತಮಗೆ ಇಷ್ಟ ಬಂದವರ ಹೆಸರುಗಳನ್ನು ಬರೆದುಕೊಂಡು ದುರಸ್ತಿಯಾಗದಿದ್ದರೂ ಲೇಔಟ್ ಮಾಡಲು ಅನುಮತಿ ನೀಡಿದ್ದಾರೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು. ಕೋಟ್ಯಂತರ ರೂಪಾಯಿ ಬೆಲೆಬಾಳುವ ರೈತರ ಜಮೀನನ್ನು ಸಾರ್ವಜನಿಕ ಹಿತದೃಷ್ಟಿಯಿಂದ ರಕ್ಷಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕು. ಜತೆಗೆ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
“ನಗರದ ಹೊರವಲಯದಲ್ಲಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಮೂಲ ಕಡತದ ಮಾದರಿಯಲ್ಲೇ ನಡೆಯಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ಜಿಲ್ಲೆಯ ಬೆಳವಣಿಗೆ ದೃಷ್ಟಿಯಿಂದ ವಿಶಾಲವಾದ ವಿಮಾನ ನಿಲ್ದಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿದ್ದೀರಾ? ಬೆಳಗಾವಿ | ಮೈಕ್ರೋ ಫೈನಾನ್ಸ್ ಕಿರುಕುಳ; ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
“ಪ್ರವಾಸಿ ಸ್ಥಳಗಳನ್ನು ಹೊಂದಿರುವ ಹಾಸನ ಜಿಲ್ಲೆಗೆ ವಿದೇಶದ ನಂಟು, ಹೊರ ರಾಜ್ಯಗಳಿಗೆ ತೆರಳಲು, ಹಾಸನದಲ್ಲಿ ಬೆಳೆದ ಬೆಳೆಗಳನ್ನು ಹೊರರಾಜ್ಯ ಹಾಗೂ ದೇಶಕ್ಕೆ ರಫ್ತು ಮಾಡಲು ವಿಶಾಲವಾದ ವಿಮಾನ ನಿಲ್ದಾಣದ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.
“ಕೃಷಿ ಕಾಲೇಜು ಬೇಕಾದರೆ ಮಂಡ್ಯದವರು ಮಾಡಿಕೊಳ್ಳಲಿ. ಈ ಜಿಲ್ಲೆಯ ಬೆಳವಣಿಗೆಗೆ ಬೇಕಾದರೇ ಅವರಿಗೂ 500 ಕೋಟಿ ಕೊಡಲಿ. ಏಳು ಜನ ಶಾಸಕರ ಗೆಲ್ಲಿಸಿ ಕೊಟ್ಟಿದ್ದು, ಅವರ ಋಣ ತೀರಿಸಲಿ, ನಮ್ಮದು ಏನಿದೆ. ಬೆಂಗಳೂರಿಗೆ ಕೃಷಿ ಕಾಲೇಜು ಇರಬೇಕು. ನಮ್ಮ ಕೃಷಿ ಕಾಲೇಜು ಅಭಿವೃದ್ಧಿ ಮಾಡಲು ಮುಂದಾಗುತ್ತೇವೆ. ಯಾವ ಕಾರಣಕ್ಕೂ ಮಂಡ್ಯಕ್ಕೆ ಸೇರಿಸುವುದು ಬೇಡ. ಹಿಂದಿನಿಂದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದೆ ನಡೆಯಲಿ. ಇಲ್ಲವಾದರೆ ನಮಗೂ ಒಂದು ಕೃಷಿ ಕಾಲೇಜು ವಿಶ್ವವಿದ್ಯಾಲಯ ಮಾಡಿಕೊಡಲಿ. ಈ ಬಗ್ಗೆ ಅಸೆಂಬ್ಲಿಯಲ್ಲಿಯೂ ಹೋರಾಟ ಮಾಡಲಾಗುವುದು” ಎಂದು ತಾಕೀತು ಮಾಡಿದರು.