
“ಪ್ರಯಾಗರಾಜ್ನ ಮಹಾಕುಂಭ ಮೇಳಕ್ಕೆ ಭೇಟಿ ನೀಡುವ ಹೆದ್ದಾರಿಗಳಲ್ಲಿ ಹೆಚ್ಚಿನ ವಾಹನದಟ್ಟಣೆ ಹಾಗೂ ಅಗತ್ಯ ವಸ್ತುಗಳ ಕೊರತೆ ಉಂಟಾಗಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ”ಎಂದು ಆರೋಪಿಸಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಮ್ಮ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
“ಪ್ರಯಾಗರಾಜ್ನಲ್ಲಿ ಪರಿಸ್ಥಿತಿ ಸುಧಾರಿಸಲು ಯಾರೂ ಮುಂದೆ ಬರುತ್ತಿಲ್ಲ. ಯಾವ ಸಚಿವರೂ ಹೊಣೆಗಾರಿಕೆ ನಿಭಾಯಿಸುತ್ತಿಲ್ಲ. ಪರಿಸ್ಥಿತಿ ನಿಭಾಯಿಸುವಲ್ಲಿ ಮುಖ್ಯಮಂತ್ರಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
“ಉತ್ತರ ಪ್ರದೇಶದ ಪ್ರಯಾಗ್ರಾಜ್ ಮಹಾಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡುವ ಸಲುವಾಗಿ ಕೋಟ್ಯಂತರ ಸಂಖ್ಯೆಯ ಜನ ಭೇಟಿ ನೀಡಿದ್ದರಿಂದ ಸೋಮವಾರ 300 ಕಿಮೀವರೆಗೂ ಸಂಚಾರ ದಟ್ಟಣೆ ಉಂಟಾಗಿತ್ತು. ಮೂರನೇ ‘ಅಮೃತ ಸ್ನಾನ’ವಾದ ವಸಂತ ಪಂಚಮಿ ಬಳಿಕ ಭಕ್ತರ ಸಂಖ್ಯೆ ಇಳಿಮುಖವಾಗಲಿದೆಯೆಂದು ಉತ್ತರ ಪ್ರದೇಶ ಸರ್ಕಾರ ಅಂದಾಜಿಸಿತ್ತು. ಶನಿವಾರ, ಭಾನುವಾರ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಪ್ರಯಾಗರಾಜ್ನತ್ತ ಪ್ರಯಾಣಿಸಿದ್ದರಿಂದ ಪ್ರಯಾಗರಾಜ್ ಸಂಪರ್ಕಿಸುವ ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಸೋಮವಾರವೂ ಹೆದ್ದಾರಿಗಳಲ್ಲಿ ನೂರಾರು ಕಿಮೀ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸಂಚಾರ ದಟ್ಟಣೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ” ವೆಂಬ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ.
“48 ಗಂಟೆಗಳಿಂದ ಹೆದ್ದಾರಿಯಲ್ಲಿ ಸಿಲುಕಿದ್ದೇವೆ. 50 ಕಿಮೀ ಅಂತರ ಕ್ರಮಿಸಲು 10ರಿಂದ 12 ಗಂಟೆ ಕಾಲ ಸಮಯ ಕಳೆಯಿತು. ವಾರಾಣಸಿ, ಅಯೋಧ್ಯೆ, ಲಖನೌ, ಕಾನ್ಪುರ ಸಂಪರ್ಕಿಸುವ ಹೆದ್ದಾರಿಗಳಲ್ಲಿ 10ರಿಂದ 12 ಕಿಮೀ ವರೆಗೂ ವಾಹನಗಳು ನಿಂತಿವೆ” ಎಂದು ಪ್ರಯಾಣಿಕರು ಸಂಕಷ್ಟ ಹೇಳಿಕೊಂಡಿರುವುದು ವರದಿಯಾಗಿದೆ.