
ಬೆಂಗಳೂರು : ಭಾನುವಾರದಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ವಿಚಾರದ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಖರ್ಗೆ, ನಮ್ಮ ಕುಟುಂಬ ಒಂದೇ ಆಗಾಗ ನಾನು ಅವರನ್ನ ಭೇಟಿ ಮಾಡುತ್ತೇನೆ ಯಾವುದೇ ರಾಜಕೀಯ ಚರ್ಚಿಸಿಲ್ಲ ಎಂದು ಹೇಳಿದರು.
ಈ ಬಗ್ಗೆ ಮಾತನಾಡಿದ ಅವರು, ಖರ್ಗೆ ಹಾಗೂ ನನ್ನ ಕುಟುಂಬ ಒಂದೇ.. ರಾಜಕೀಯ ಹೊರತುಪಡಿಸಿ ಹಿರಿಯಣ್ಣನ ಮನೆಗೆ ಆಗಾಗ ಹೋಗುತ್ತಾ ಇರುತ್ತೇನೆ. ಆದರೆ ಯಾವ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ, ಕೇವಲ ಕುಟುಂಬದ ಅನೇಕ ವಿಚಾರ ಮಾತನಾಡಿದ್ದೇವೆ ಅಷ್ಟೇ ಎಂದರು.
ಸದ್ಯದಲ್ಲೇ ನಾನು ಇಲಾಖೆಗೆ ಸಂಬಂಧಪಟ್ಟಂತೆ ಕೆಲ ಕೆಲಸದ ಮೇರೆಗೆ ದೆಹಲಿಗೆ ಹೋಗುತ್ತೇನೆ, ಅದರಲ್ಲಿ ಮುಚ್ಚುಮರೆ ಯಾಕೆ, ರಾಜಕೀಯದ ಬಗ್ಗೆ ಚರ್ಚೆ ಮಾಡಿದ್ವಾ ಇಲ್ವಾ ಅಂತ ನಿಮಗೆ ಹೇಳುತ್ತೇನೆ ಅಲ್ವಾ. ಹಾಗೆ ನಿನ್ನೆ ಕೂಡ ರಾಜಕೀಯದ ಬಗ್ಗೆ ಚರ್ಚೆ ಮಾಡಿದ್ರೆ ಹೇಳ್ತೇನೆ ಏನು ಚರ್ಚೆ ಮಾಡಿದ್ವಿ ಅಂತ ಹೇಳ್ತೇನಾ ಎಂದು ಪರಮೇಶ್ವರ್ ಪ್ರಶ್ನಿಸಿದರು.
ಇನ್ನು ಇದೇ ವೇಳೆ ಹೆಚ್ಚು ತೆರಿಗೆ ಕಟ್ಟುತ್ತೇವೆ ಅಂತ ಹೆಚ್ಚು ಕೇಳೋದು ಸಣ್ಣತನ ಎಂಬ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿಕೆ ಪ್ರತಿಕ್ರಿಯಿಸಿದ ಅವರು, ನಮಗೊಂದಿಷ್ಟು ಶೇರು ಕೊಡಬೇಕು ಕೊಡಿ ಅಂತ ಕೇಳೋದೆ ತಪ್ಪಾ, ನಮ್ಮ ಹಣವನ್ನು ನಾವು ಕೇಳಿದರೆ ಅದರಲ್ಲಿ ಏನಿದೆ ಎಂದು ಕಿಡಿಕಾರಿದರು.
ಒಂದು ಕಡೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಿವಾಳಿ ಅಂತಾರೆ, ಇದು ಒಂದು ವ್ಯವಸ್ಥೆ, ನಾಚಿಕೆ ಆಗ್ಬೇಕು ಇವೆರಿಗೆಲ್ಲಾ, ಅದೇ ಟ್ಯಾಕ್ಸ್ ಕೊಡಲ್ಲ ಎಂದು ಹೇಳಲಿ ನೋಡೋಣ ಆಮೇಲೆ ನಾವು ಏನು ಮಾಡಬೇಕೋ ಮಾಡುತ್ತೇವೆ ಎಂದು ಪರಂ ಎಚ್ಚರಿಕೆ ನೀಡಿದರು.