ಬೀದರ್ನಲ್ಲಿ ಎಟಿಎಂಗೆ ಹಣ ತುಂಬಿಸುವವರ ಮೇಲೆ ಶೂಟೌಟ್ ಪ್ರಕರಣ, ಮಂಗಳೂರಿನ ಉಳ್ಳಾಲ ಕೋಟೆಕಾರು ಬ್ಯಾಂಕ್ನಲ್ಲಿ ದರೋಡೆ ಪ್ರಕರಣಗಳು ಮಾಸುವ ಮುನ್ನವೇ ಮೈಸೂರಿನಲ್ಲಿಯೂ ಇಂತಹ ದುಷ್ಕೃತ್ಯ ನಡೆದಿದ್ದು, ಹಗಲು ಹೊತ್ತಿನಲ್ಲೇ ಕಾರು ಅಡ್ಡಗಟ್ಟಿ ದರೋಡೆ ಮಾಡಿದ ದುಷ್ಕರ್ಮಿಗಳು ಕಾರು ಸಹಿತ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ.
ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು, ಕೇರಳ ಮೂಲದ ಉದ್ಯಮಿ ಸೂಫಿ ಎಂಬವರಿಗೆ ಸೇರಿದ ಇನ್ನೋವಾ ಕಾರು, ಹಣ ಕಸಿದುಕೊಂಡು ಖದೀಮರು ಪರಾರಿಯಾಗಿದ್ದಾರೆ. ಎರಡು ಕಾರುಗಳಲ್ಲಿ ಬಂದಿದ್ದ ನಾಲ್ವರು ಮುಸುಕುಧಾರಿಗಳು ಉದ್ಯಮಿ ಸೂಫಿಯವರ ಕಾರು ಕಿತ್ತುಕೊಂಡ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಮೈಸೂರಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಡಿವೈಎಸ್ಪಿ ರಘು ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ. ಉದ್ಯಮಿ ಸೂಫಿಯಿಂದ ಜಯಪುರ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಸದ್ಯ ಹಣ ಕಳೆದುಕೊಂಡ ಉದ್ಯಮಿ ಸೂಫಿ ಮತ್ತು ಅಸ್ರಫ್ ಪೊಲೀಸರ ಮುಂದೆ ವ್ಯತಿರಿಕ್ತ ಹೇಳಿಕೆ ನೀಡದ್ದು, ಒಬ್ಬರು ಜಮೀನು ಖರೀದಿಗೆ ಮೈಸೂರಿಗೆ ಬಂದಿದ್ದೆವು ಎಂದರೆ, ಮತ್ತೊಬ್ಬರು ಚಾಕೋಲೆಟ್ ವ್ಯಾಪಾರಕ್ಕೆ ಬಂದಿದ್ದಾಗಿ ಹೇಳಿದ್ದಾರೆ. ಒಮ್ಮೊಮ್ಮೆ ಒಂದೊಂದು ರೀತಿಯ ಮಾಹಿತಿ ನೀಡುತ್ತಿರುವ ಇಬ್ಬರ ಹೇಳಿಕೆಗಳೂ ಅನುಮಾನ ಮೂಡಿಸಿವೆ.
ಇದನ್ನೂ ಓದಿದ್ದೀರಾ? ಆಕ್ರೋಶಗೊಂಡ ರೈತರಿಂದ ಅಧಿಕಾರಿಗಳೊಂದಿಗೆ ವಾಗ್ವಾದ, ಶಾಸಕರಿಂದ ಮಾತುಕತೆ
ಆದರೆ, ಎರಡು ಕಾರಿನಲ್ಲಿ ಬಂದ ಅಪರಿಚತರು, ಕಾರು ಅಡ್ಡಗಟ್ಟಿ ಕಣ್ಣಿಗೆ ಸ್ಪ್ರೇ ಮಾಡಿ ಕಾರು ಕಿತ್ತುಕೊಂಡು ಪರಾರಿಯಾದರೆಂದು ಉದ್ಯಮಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಮೈಸೂರು ಪೊಲೀಸರು ಅಖಾಡಕ್ಕಿಳಿದಿದ್ದು, ಸತ್ಯಾಸತ್ಯತೆಯ ವಿಚಾರಣೆಗೆ ಮುಂದಾಗಿದ್ದಾರೆ. ಆರೋಪಿಗಳ ಬೇಟೆಗೆ ಬಲೆ ಬೀಸಿದ್ದಾರೆ. ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಶಿಸಿದ್ದು, ಎಲ್ಲಾ ಕಡೆ ನಾಕಾಬಂಧಿ ಹಾಕಿದ್ದಾರೆ. ಆರೋಪಿಗಳು ರಾಜ್ಯ ಬಿಟ್ಟು ಹೋಗುವ ಮುನ್ನವೇ ಸೆರೆ ಹಿಡಿಯಲು ಕಾರ್ಯಾಚರಣೆ ಶುರು ಮಾಡಿದ್ದಾರೆ.