
ಮಂಡ್ಯ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಕಡು ಭ್ರಷ್ಟ ಎಂದು ರಾಜ್ಯಸಭೆಯಲ್ಲಿ ಜರಿದಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಚಲುವರಾಯಸ್ವಾಮಿ ಅವರು, ಹೌದ್..ಹೌದು ದೇವೇಗೌಡರ ಕುಟುಂಬ ಮಾತ್ರ ರಾಜ್ಯದಲ್ಲಿ ಪ್ರಾಮಾಣಿಕವಾಗಿದ್ದಾರೆ ಎಂದು ತಿರುಗೇಟು ನೀಡಿದರು.
ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಲು ಬಹಳಷ್ಟಿದೆ… ಅವರು ನಮ್ಮನ್ನು ಟೀಕಿಸುತ್ತಲೇ ಇರಲಿ. ದೇವರು ಇನ್ನು ಹತ್ತಾರು ವರ್ಷ ಅವರಿಗೆ ಆಯಸ್ಸು ನೀಡಲಿ ಎಂದು ಆಶಿಸಿದರು. ಇನ್ನು ದೇವೇಗೌಡರೊಂದಿಗೆ ಇದ್ದು ನಾನು ರಾಜಕಾರಣ ಮಾಡಿದವನು. ಅವರ ಮಕ್ಕಳಿಗೆ ದೇವೇಗೌಡರು ಯಾವ ರೀತಿ ಬುದ್ದಿ ಹೇಳಿದ್ದರು ಎಂಬುವುದು ಗೊತ್ತಿದೆ ಬಿಡಿ ಎಂದು ಟೀಕಿಸಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಬಳಸಿಕೊಳ್ಳುತ್ತಿಲ್ಲ ಎಂಬ ಮಾತಿಗೂ ಟಾಂಗ್ ನೀಡಿರುವ ಸಚಿವರು, ಕೇಂದ್ರದ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಅನುದಾನ ಕೊಟ್ಟಿಲ್ಲ. ಆಂಧ್ರ, ಬಿಹಾರ ಹೀಗೆ ಅವರಿಗೆ ಬೇಕಾದ ರಾಜ್ಯಗಳಿಗೆ ಅನುದಾನ ನೀಡಿದ್ದಾರೆ. ಮೊದಲು ಅವರು ರಾಜ್ಯಕ್ಕೆ ಅಗತ್ಯವಿರುವ ಅಭಿವೃದ್ಧಿ ಕೆಲಸಗಳತ್ತ ಗಮನ ಹಸಿಸಲು ತಿಳಿಸಿ ಎಂದು ಮಾತಲ್ಲೇ ಚಲುವರಾಯಸ್ವಾಮಿ ತಿವಿದರು.