
ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ, ಆರೋಗ್ಯ, ಪೌಷ್ಠಿಕತೆ, ಮೂಲಭೂತ ಸೌಲಭ್ಯಗಳ ಸುಧಾರಣೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಯಚೂರು ನಗರದ ಪ್ರಗತಿಪರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಕಲ್ಯಾಣ ಕರ್ನಾಟಕ ಭಾಗದ ಇತರೆ ಜಿಲ್ಲೆಗಳಿಗೆ ವಿಸ್ತರಿಸಲು ತೀರ್ಮಾನ ಕೈಗೊಂಡಿದ್ದಾರೆ.
ಸಮಿತಿಯ ಸಂಚಾಲಕಿ ವಿದ್ಯಾ ಪಾಟೀಲ್ ಮಾತನಾಡಿ, “ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ವಿಚಾರವಾಗಿ ಸರ್ಕಾರ ಯಾವುದೇ ನಿರ್ದಿಷ್ಠವಾದ ಪ್ರತಿಕ್ರಿಯೆ ನೀಡಿಲ್ಲ. ಆದ್ದರಿಂದ ತಾತ್ಕಾಲಿಕವಾಗಿ ಧರಣಿಯನ್ನು ಸ್ಥಗಿತಗೊಳಿಸಿ ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪವನ್ನು ಬದಲಿಸಲು ಚರ್ಚೆ ನಡೆಸಲಾಗುವುದು” ಎಂದರು.
“ಕಳೆದ ಎರಡು ವರ್ಷದಿಂದ ಈ ವಿಚಾರದ ಬಗ್ಗೆ ಹೋರಾಟಗಳನ್ನು ಮಾಡುತ್ತ ಬಂದಿದ್ದರೂ ಯಾವುದೇ ಸರ್ಕಾರಗಳು ನಮ್ಮ ಹೋರಾಟಕ್ಕೆ ಸರಿಯಾದ ಸ್ಪಂದನೆ ನೀಡದೇ ಅವಮಾನ ಮಾಡುತ್ತಿವೆ. ಇದು ಕೇವಲ ರಾಯಚೂರು ಜಿಲ್ಲೆಯ ವಿಷಯವಲ್ಲ. 13 ಲಕ್ಷ ಮಂದಿ ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರಿಲ್ಲದೇ ಶಾಲೆಗಳಲ್ಲಿರುವ ಮಕ್ಕಳಿಗೆ ತೊಂದರೆಯಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಇತರೆ ಜಿಲ್ಲೆಗಳಿಗೆ ಹೋರಾಟವನ್ನು ಕೊಂಡೊಯ್ಯುವ ನಿರ್ಧಾರವನ್ನು ಕೈಗೊಳ್ಳಲಾಗಿದೆ” ಎಂದರು.

ಮತ್ತೋರ್ವ ಸಂಚಾಲಕ ಬಸವರಾಜ ಗಬ್ಬೂರು ಮಾತನಾಡಿ, “ರಾಜ್ಯ ಸರ್ಕಾರ ಈ ಹೋರಾಟಕ್ಕೆ ಪ್ರತಿಕ್ರಿಯೆಯನ್ನು ನೀಡಿಲ್ಲ. ಚರ್ಚೆಯಾಗಿರುವ ಬಗ್ಗೆ ಸುದ್ದಿಯಿದೆ. ಹೋರಾಟಗಾರರಿಗೆ ಆಶ್ವಾಸನೆಗಳು ಬಂದಿಲ್ಲ. ಬೇರೆ ಬೇರೆ ಜಿಲ್ಲೆಗಳಲ್ಲಿ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ” ಎಂದರು.
ಹೋರಾಟದ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ ನಿತೀಶ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ತುಕಾರಾಂ ಭೇಟಿ ನೀಡಿ, ಮನವಿ ಪತ್ರ ಸ್ವೀಕರಿಸಿದ್ದು, “ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರದ ಗಮನಕ್ಕೆ ತರಲಾಗಿದೆ. ನೀವು ನೀಡಿದ ಐದು ಬೇಡಿಕೆಗಳಲ್ಲಿ ಈಗಾಗಲೇ ಕುಡಿಯುವ ನೀರು ಆರೋ ಪ್ಲಾಂಟ್ಗಳನ್ನು ರಿಪೇರಿ ಮಾಡಲು ಪ್ರಾರಂಭಿಸಲಾಗಿದೆ” ಎಂದು ತಿಳಿಸಿದರು.
“ವಿಶೇಷವಾಗಿ ರಾಯಚೂರು ಜಿಲ್ಲೆಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಹಾಗೂ ಅಪೌಷ್ಠಿಕತೆ ತಡೆಗಟ್ಟಲು ಮಾರ್ಚ್ ತಿಂಗಳೊಳಗೆ ಕಾರ್ಯರೂಪಕ್ಕೆ ತರಲು ಪ್ರಯತ್ನ ನಡೆದಿದೆ. ಜತೆಗೆ ದೇವದಾಸಿ ಪದ್ದತಿ ಮರುಸಮೀಕ್ಷೆ ನಡೆಸಲು ಈಗಾಗಲೇ ತರಬೇತಿ ನಡೆಯುತ್ತಿದೆ” ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿ ಈ ಹೋರಾಟವನ್ನು ಇಲ್ಲಿಗೆ ಸ್ಥಗಿತಗೊಳಿಸಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಅಭಯ, ಮಾರೆಮ್ಮ, ಮೋಕ್ಷಮ್ಮ, ರಾಧಾ, ಗುರುರಾಜ, ಸೈಯದ್ ಹಫೀಜುಲ್ಲಾ, ವಿರುಪಮ್ಮ, ಕೃಷ್ಣಪ್ರಸಾದ್, ಬಸವರಾಜ, ಸೇರಿದಂತೆ ಇತರರು ಇದ್ದರು.