
20 ವರ್ಷಗಳ ಹಿಂದೆಯೇ ಮೃತಪಟ್ಟಿರುವ ಮಹಿಳೆಯ ಬದಲಿಗೆ ಈಕೆ ಜೀವಂತ ಇರುವಂತೆ ನಕಲಿ ಮಹಿಳೆಯನ್ನು ಸೃಷ್ಟಿಸಿ, ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿ ಲಪಟಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಡಿಸಿಪಿ ರೋಹನ್ ಜಗದೀಶ್ ಅವರು ಈ ಕುರಿತು ಸುದ್ದಿಗೋಷ್ಠಿ ನಡೆಸಿದ್ದು, “ಬೆಳಗಾವಿ ತಾಲೂಕಿನ ಬಾಚಿ ಗ್ರಾಮದ ಕಮಲಾಬಾಯಿ ಅಸಗಾಂವಕರ್ ಅವರ ಬಳಿ 8.30 ಎಕರೆ ಜಮೀನು ಇತ್ತು. ಈ ಜಮೀನು ಕಳೆದ 20 ವರ್ಷಗಳಿಂದ ಯಾರದೇ ಹೆಸರಿಗೂ ವರ್ಗಾವಣೆಯಾಗಿರಲಿಲ್ಲ. ಅಲ್ಲದೆ ಇದಕ್ಕೆ ಯಾರೂ ವಾರಸುದಾರರು ಇಲ್ಲ ಎಂಬುದನ್ನು ತಿಳಿದುಕೊಂಡ ಕಿಡಿಗೇಡಿ ಆರೋಪಿಗಳು ಕಮಲಾಬಾಯಿ ಅಸಗಾಂವಕರ್ ಅವರು ಜೀವಂತ ಇರುವಂತೆ ಮರು ಸೃಷ್ಟಿ ಮಾಡಿ, ಜಮೀನನ್ನು ಸಾಗರ ಜಾಧವ್ ಎಂಬುವರಿಗೆ ವರ್ಗಾವಣೆ ಮಾಡಿದ್ದರು” ಎಂದರು.
“ಜಮೀನು ಬೇರೆಯವರ ಹೆಸರಿಗೆ ವರ್ಗಾವಣೆಯಾದ ವಿಚಾರ ತಿಳಿಯುತ್ತಿದ್ದಂತೆ ಅಸಗಾಂವಕರ್ ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿತ್ತು. ಕೂಡಲೇ ಗ್ರಾಮೀಣ ಠಾಣೆಗೆ ದೌಢಾಯಿಸಿದ ಕುಟುಂಬಸ್ಥರು ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿದಾಗಲೇ ಆರೋಪಿಗಳ ಮುಖವಾಡ ಕಳಚಿ ಬಿದ್ದಿದೆ. ಪ್ರಕರಣ ಸಂಬಂಧ ಜಮೀನು ಲಪಟಾಯಿಸಿದ ಆರೋಪಿಗಳಾದ ಕಡೋಲಿಯ ಶಾಂತಾ ನಾರ್ವೇಕರ್, ರಷೀದ್ ತಹಶೀಲ್ದಾರ್, ಮುತ್ಯಾನಟ್ಟಿಯ ಸುರೇಶ ಬೆಳಗಾವಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ” ಎಂದು ಹೇಳಿದರು.
“8.30 ಎಕರೆ ಜಮೀನಿನ ಒಡತಿಯಾಗಿದ್ದ ಕಮಲಾಬಾಯಿ ಅಸಗಾಂವ್ಕರ್ 2001ರಲ್ಲಿಯೇ ನಿಧನರಾಗಿದ್ದರು. ಅವರಿಗೆ 12 ಜನ ಮಕ್ಕಳು. ಈ ಎಲ್ಲ ಆಸ್ತಿ ಪುತ್ರ ವಿಜಯ್ ಅಸಗಾಂವಕರ್ ಅವರಿಗೆ ಸೇರಬೇಕೆಂದು ವಿಲ್ ಬರೆದು ಇಟ್ಟಿದ್ದರು. ದುರಾದೃಷ್ಟವಶಾತ್ ಕಮಲಾಬಾಯಿ ನಿಧನರಾದ ಎರಡೇ ವರ್ಷಗಳಲ್ಲಿ ಪುತ್ರ ವಿಜಯ್ ಕೂಡಾ ನಿಧನರಾಗಿದ್ದರು. ಆದರೆ, ತಾಯಿ ಹೆಸರಲ್ಲಿದ್ದ ಆಸ್ತಿ ಮಗನಿಗೆ ವರ್ಗಾವಣೆಯಾಗಿರಲಿಲ್ಲ” ಎಂದು ತಿಳಿಸಿದರು.
“ಇನ್ನು ಅತ್ತೆ ಕಮಲಾಬಾಯಿ ಹಾಗೂ ಪತಿ ವಿಜಯ್ ತೀರಿಹೋದ ಬಳಿಕ ಸೊಸೆ ವಿನುತಾ ಮುಂಬೈನಲ್ಲಿ ನೆಲೆಸಿದ್ದರು. ಕೆಲ ದಿನಗಳ ಹಿಂದೆ ಅತ್ತೆ ಹೆಸರಿನಲ್ಲಿದ್ದ ಜಮೀನು ಬೇರೆಯವರಿಗೆ ವರ್ಗಾವಣೆಯಾಗಿದೆ ಎನ್ನುವ ಮಾಹಿತಿ ತಿಳಿಯುತ್ತದೆ. ಕೂಡಲೇ ದಾಖಲೆ ತೆಗೆಸಿ ನೋಡಿದಾಗ ಅವರು ಆಘಾತಕ್ಕೊಳಗಾಗಿದ್ದಾರೆ. ಬಳಿಕ ವಿನುತಾ ಅವರು ಈ ಬಗ್ಗೆ ದೂರು ನೀಡಿದ್ದರು. ಕಡೋಲಿ ಗ್ರಾಮದ ಶಾಂತಾ ನಾರ್ವೇಕರ್ ಅವರನ್ನೇ ಕಮಲಾಬಾಯಿಯನ್ನಾಗಿ ಮರು ಸೃಷ್ಟಿಸಿದ್ದರು. ನಕಲಿ ಆಧಾರ್ ಕಾರ್ಡ್, ನಕಲಿ ಸಹಿ ಮಾಡಿಸಿ ಕಮಲಾಬಾಯಿ ಜಮೀನನ್ನು ಆರೋಪಿಗಳು ವರ್ಗಾವಣೆ ಮಾಡಿಕೊಂಡಿದ್ದರು” ಎಂದು ತಿಳಿಸಿದ್ದಾರೆ.
“ಈ ಪ್ರಕರಣದಲ್ಲಿ ಆರೋಪಿಯನ್ನು ಈಗಾಗಲೇ ದಸ್ತಗಿರಿ ಮಾಡಿದ್ದೇವೆ. ಮುಂದಿನ ತನಿಖೆ ಮಾಡಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡುತ್ತೇವೆ” ಎಂದು ಮಾಹಿತಿ ನೀಡಿದರು.
“ಈ ಜಾಲದ ಹಿಂದೆ ರಿಯಲ್ ಎಷ್ಟೇಟ್ ಮಾಫಿಯಾ ಇರಬಹುದು. ಜಮೀನಿಗೆ ಬಂಗಾರದ ಬೆಲೆ ಬಂದಿದ್ದು, ಈಗ ಈ ರೀತಿಯ ವಂಚನೆಯ ಜಾಲಗಳು ಸಕ್ರಿಯವಾಗಿವೆ. ಹಾಗಾಗಿ, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಅಲ್ಲದೇ ಇದರಲ್ಲಿ ಇನ್ನೂ ಯಾರೆಲ್ಲಾ ಶಾಮೀಲಾಗಿದ್ದಾರೆಂಬುದನ್ನು ಪತ್ತೆಹಚ್ಚಿ, ಅವರನ್ನೂ ಬಂಧಿಸಿ ಹೆಚ್ಚಿನ ವಿಚಾರಣೆ ಮಾಡಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ.