
ಹಾಸನ: ಜಾತಿ ಜನಗಣತಿ ವರದಿ ಜಾರಿ ಮಾಡಿ, ರಾಜ್ಯ ಬಜೆಟ್ ನಲ್ಲಿ ಎಸ್ಸಿ ಮತ್ತು ಎಸ್ಟಿ ಅನುದಾನ ಮೀಸಲಿರಿಸಲು ಕಾಂತರಾಜ್ ಆಯೋಗದ ಜಾತಿ ಜನಗಣತಿ ವರದಿ ಬಿಡುಗಡೆಗೆ ಮತ್ತು ರಾಜ್ಯ ಬಜೆಟ್ ನಲ್ಲಿ ನಮ್ಮ ಬೇಡಿಕೆಗಳನ್ನು ಘೋಷಿಸಲು ಆಗ್ರಹಿಸಿ ಜೈಭೀಮ್ ಬ್ರಿಗೇಡ್ ಸಂಘಟನಾ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಇದೆ ವೇಳೆ ಜೈಭೀಮ್ ಬ್ರಿಗೇಡ್ ಸಂಘಟನಾ ಸಮಿತಿ ಜಿಲ್ಲಾಧ್ಯಕ್ಷ ರಾಜೇಶ್ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಗಳು ಇದ್ದು, ರಾಜ್ಯ ಬಜೆಟ್ ನಲ್ಲಿ ಎಸ್ಸಿ ಮತ್ತು ಎಸ್ಟಿ ಅನುದಾನ ಮೀಸಲಿರಿಸಲು ಕಾಂತರಾಜ್ ಆಯೋಗದ ಜಾತಿ ಜನಗಣತಿ ವರದಿಯನ್ನು ಬಜೆಟ್ ಗೂ ಮೊದಲೆ ಬಿಡುಗಡೆಗೊಳಿಸಬೇಕು. ಪರಿಶಿಷ್ಠ ಜಾತಿ/ಪಂಗಡಗಳ ಅಭ್ಯದಯಕ್ಕಾಗಿ ಜಾರಿಗೆ ತಂದಿರುವ ಅನುಸೂಚಿತ ಜಾತಿ/ ಪಂಗಡಗಳ ಉಪ-ಯೋಜನೆ ಕಾಯ್ದೆ (2013) ಮೂಲ ಆಶಯಕ್ಕೆ ವಿರುದ್ಧವಾಗಿದ್ದ ಕಾಯ್ದೆಯ ಕಲಂ 137, ಯಿಂದಾಗಿ ಖೋತವಾಗಿರುವ 1.05ಲಕ್ಷ ಕೋಟಿ ಅನುದಾನವನ್ನು ಮತ್ತೆ ವಾಪಸ್ ನೀಡಿ, ಪ್ರಸ್ತುತ ಬಜೆಟ್ನಲ್ಲಿ ಪರಿಷ್ಠರ ಪ್ರತಿ ಕುಟುಂಬಕ್ಕೆ ತಲಾ 25 ಲಕ್ಷ ಸಹಾಯದನವನ್ನು ಪ್ರಸ್ತುತ ಬಜೆಟ್ ನಲ್ಲಿ ಘೋಷಿಸಿ, ಸ್ವಯಂ ಉದ್ಯೋಗ ಕಲ್ಪಿಸಿ ರಾಜ್ಯದೆಲ್ಲಾ ದಲಿತ ಕುಟುಂಬಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದರು. ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣದ ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೊಳಿಸಲು ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಈ ಕೂಡಲೇ ಜಾರಿಗೊಳಿಸಬೇಕು.
ಪರಿಶಿಷ್ಠ ಜಾತಿ/ ಪಂಗಡ ಮತ್ತು ಹಿಂದುಳಿದವರ್ಗ ಹಾಗೂ ಅಲ್ಪಸಂಖ್ಯಾತರ ಎಲ್ಲಾ ಅಭಿವೃದ್ಧಿ ನಿಗಮಗಳಿಗೆ ನೇರ ಸಾಲ ನೀಡಲು ತಲಾ 500 ಕೋಟಿ ಅನುದಾನವನ್ನು ಪ್ರಸ್ತುತ ಬಜೆಟ್ ನಲ್ಲಿ ಮೀಸಲಿರಿಸಬೇಕು. ಈ ಜನವರ್ಗಗಳ ಸ್ವಯಂ ಉದ್ಯೋಗಿಗಳ ನೆರವಿಗೆ ರಾಜ್ಯ ಸರ್ಕಾರ ಬರಬೇಕು ಎಂದು ಒತ್ತಾಯಿಸಿದರು. ರಾಜ್ಯದ ರೈತರ ಕೃಷಿ ಉತ್ಪನ್ನಗಳಿಗೆ ಡಾ| ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ವೈಜ್ಞಾನಿಕ ಬೆಂಬಲ ಬೆಲೆಯನ್ನು ಪ್ರಸ್ತುತ ಬಜೆಟ್ ನಲ್ಲಿ ಘೋಷಿಸಬೇಕು. ರಾಜ್ಯದ ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕು. ಬುದ್ಧ ನಾಡಾದ ಈ ಭಾರತದಲ್ಲಿ ಭಗವಾನ್ ಬುದ್ಧರ ವಿಚಾರ ಕ್ರಾಂತಿ ಮತ್ತು ಬೌದ್ಧ ಸ್ಮಾರಕ ಸಂರಕ್ಷಣೆಗಾಗಿ ಹಾಗೂ ಬೌದ್ಧ ಧಮ್ಮ ಅನುಯಾಯಿಗಳ ಅಭಿವೃದ್ಧಿಗಾಗಿ “ರಾಜ್ಯ ಭೌದ್ಧ ಪ್ರಾಧಿಕಾರ” ಸ್ಥಾಪನೆ ಬಗ್ಗೆ ಪ್ರಸ್ತುತ ರಾಜ್ಯ ಬಜೆಟ್ ನಲ್ಲಿ ಘೋಷಿಸಬೇಕು.
ದಲಿತ ಹಿಂದುಳಿದ ಅಲ್ಪಸಂಖ್ಯಾತ ಬಹುಜನರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡಲು ಮತ್ತು ನಿರ್ವಹಣಾ ವೆಚ್ಚ ಸೇರಿ ಮಾಸಿಕ 3500ರೂ.ಗಳನ್ನು ನೀಡಬೇಕು. ವಿದೇಶ ಆಧ್ಯಯನದ ವಿದ್ಯಾರ್ಥಿಗಳ ಅನುದಾನವನ್ನು ಹೆಚ್ಚಿಸಬೇಕು. ರಾಜ್ಯದಲೆಲ್ಲಾ ವಸತಿಶಾಲೆಗಳ ಸಮರ್ಪಕ ಉಸ್ತುವಾರಿ ಇಲ್ಲದ ಕಾರಣ ಜಿಲ್ಲಾಮಟ್ಟದ ಸಮಾಜಕಲ್ಯಾಣ ಇಲಾಖಾ ಅಡಿಯಲ್ಲಿನ ಆಡಳಿತಕ್ಕೊಳಪಡಿಸಬೇಕು ಎಂದರು. ಬಜೆಟ್ ಗಾತ್ರದ ಶೇ. 24% ರಷ್ಟು ಅನುದಾನವನ್ನು ಪರಿಶಿಷ್ಠರ ಕಲ್ಯಾಣಕ್ಕೆ 45 ಸಾವಿರ ಕೋಟಿ ಮೀಸಲಿಡಬೇಕು. ವಿಶೇಷ ಚೇತನರಿಗೆ ರೂ.1400 ರಿಂದ ರೂ.3000 ಕ್ಕೆ ಮಾಶಾಸನ ಹೆಚ್ಚಿಸಬೇಕು ಹಾಗೂ ರಾಜ್ಯದ ಪ್ರತಿಷ್ಠಿತ ಜಾಗದಲ್ಲಿ 250 ಅಡಿ ಡಾ. ಅಂಬೇಡ್ಕರ್ ಪ್ರತಿಮೆ ಅನಾವರಣಗೊಳ್ಳಬೇಕು ಹಾಗೂ ದಸಂಸ ಸ್ಥಾಪಕ ಬಿ. ಕೃಷ್ಣಪ್ಪ ರವರ ಜನ್ಮ ದಿನವನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು, ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ನಮ್ಮ ಮನವಿಯಲ್ಲಿ ಹಕ್ಕೋತ್ತಾಯ ಮಾಡಿರುವುದಾಗಿ ಹೇಳಿದರು. ಇದೆ ವೇಳೆ ಜೈಭೀಮ್ ಬ್ರಿಗೇಡ್ ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ರಾಮು, ತಮ್ಮಯ್ಯ ಇತರರು ಉಪಸ್ಥಿತರಿದ್ದರು.