
ದೆಹಲಿ ವಿಧಾನಸಭಾ ಚುನಾವಣೆಗೆ ಕೇವಲ ಎರಡು ದಿನಗಳು ಬಾಕಿಯಿದ್ದು, ಬಹಿರಂಗ ಪ್ರಚಾರಕ್ಕೆ ಫೆಬ್ರವರಿ 3ರ ಸಂಜೆ 5ಕ್ಕೆ ತೆರೆ ಬೀಳಲಿದೆ.
ಕೊನೆಯ ದಿನದ ಪ್ರಚಾರದಲ್ಲಿ ಇಂದು ಬಿಜೆಪಿ ದೆಹಲಿಯಾದ್ಯಂತ 22 ರೋಡ್ ಶೋಗಳು ಮತ್ತು ರ್ಯಾಲಿಗಳನ್ನು ಹಮ್ಮಿಕೊಂಡಿದ್ದು, 25 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಕೇಸರಿ ಪಾಳಯವಿದೆ.
ಇನ್ನೊಂದೆಡೆ, ಉಚಿತ ಕಲ್ಯಾಣ ಯೋಜನೆಗಳ ಮೇಲೆ ಆಡಳಿತ ನಡೆಸಿಕೊಂಡು ಬಂದ ಆಮ್ ಆದ್ಮಿ ಪಕ್ಷ(ಎಎಪಿ) ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಭರವಸೆಯಲ್ಲಿದೆ. ಜತೆಗೆ 2013ರವರೆಗೆ 15 ವರ್ಷಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್, ಅಸ್ತಿತ್ವ ಕಳೆದುಕೊಂಡಲ್ಲೇ ಮತ್ತೆ ನೆಲೆ ಕಂಡುಕೊಳ್ಳುವ ಹುಮ್ಮಸ್ಸಿನಲ್ಲಿದೆ.
ಮೂರೂ ಪಕ್ಷಗಳು ಗೆಲುವಿಗಾಗಿ ಸೆಣೆಸಾಟ ನಡೆಸುತ್ತಿದ್ದು, ಆಕರ್ಷಕ ಭರವಸೆ, ಘೋಷಣೆ, ಪರಸ್ಪರ ಮಾತಿನ ಏಟು–ಎದುರೇಟುಗಳು ಸೇರಿದಂತೆ ಪ್ರಚಾರ ಗೀತೆಗಳಿಂದ ದೆಹಲಿ ಚುನಾವಣಾ ಅಖಾಡ ಗರಿಗೆದರಿದೆ.
ಎಎಪಿ, ಬಿಜೆಪಿಯು ‘ಭಾರತೀಯ ಸುಳ್ಳಿನ ಪಕ್ಷ’ (ಭಾರತೀಯ ಜೂಟಾ ಪಾರ್ಟಿ), ‘ನಿಂದನೆ ಮಾಡುವ ಪಕ್ಷ ’(ಗಲಿ ಗಲೌಚ್ ಪಾರ್ಟಿ)ವೆಂದು ವಾಗ್ದಾಳಿ ನಡೆಸಿತ್ತು. ಇದಕ್ಕೆ ಪ್ರತ್ಯುತ್ತರ ನೀಡಿದ ಪ್ರಧಾನಿ ನರೇಂದ್ರ ಮೋದಿ, ಎಎಪಿಯನ್ನು ‘ಆಪ್–ಡಾ’ ಮತ್ತು ಅದರ ನಾಯಕ ಅರವಿಂದ್ ಕೇಜ್ರಿವಾಲ್ ‘ಘೋಷ್ಣಾ ಮಂತ್ರಿ’ ಎಂದು ಜರಿದಿದ್ದಾರೆ.
ಇದನ್ನೂ ಓದಿದ್ದೀರಾ? ಮಡಿವಾಳ ಮಾಚಿದೇವರ ಮೆರವಣಿಗೆಗೆ ಶಾಸಕ ಹೆಚ್.ಪಿ. ಸ್ವರೂಪ್ ಚಾಲನೆ
ಕಾಂಗ್ರೆಸ್ ಪಕ್ಷವು, ಕೇಜ್ರಿವಾಲ್ ಅವರನ್ನು ‘ಫರ್ಜಿವಾಲ್’(ನಕಲಿ) ಮತ್ತು ಮೋದಿಯವರ ‘ಛೋಟಾ ರೀಚಾರ್ಜ್’(ಸಣ್ಣ ರೀಚಾರ್ಜ್) ಎಂದು ವ್ಯಂಗ್ಯ ಮಾಡಿದೆ.
“ಫೆ.5ರಂದು ನಡೆಯಲಿರುವ ಚುನಾವಣೆಯಲ್ಲಿ ದೆಹಲಿಯ 13,766 ಮತಗಟ್ಟೆಗಳಲ್ಲಿ 1.56 ಕೋಟಿ ಮತದಾರರು ತಮ್ಮ ಮತ ಚಲಾಯಿಸಲು ಅರ್ಹರಾಗಿದ್ದಾರೆ” ಎಂದು ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.