
ಟ್ರಾಕ್ಟರ್-ಕಾರು ನಡುವೆ ಸಂಭವಿಸಿದ ಅಪಘಾತ(Accident)ದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪುರ ತಾಂಡಾದ ಬಳಿ ನಡೆದಿದೆ.
ಕಲಬುರಗಿ ಪಟ್ಟಣದ ಪ್ರಶಾಂತ ನಗರ ನಿವಾಸಿ ವಿದ್ಯಾ(40) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ, ನಿತಿನ್ ಕುಮಾರ್(42) ವೈಷ್ಣವಿ(15) ಗಂಭೀರ ಗಾಯಗೊಂಡಿದ್ದು, ವೇದಾಂತ(10) ಪ್ರಾಣಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಕಲಬುರಗಿ ಯುನೈಟೆಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
“ಚೌಡಾಪುರ ತಾಂಡಾದ ಸಮೀಪವಿರುವ ಶಾಲೆಯ ಹತ್ತಿರ ಅಪಘಾತ ಸಂಭವಿಸಿದ್ದು, ಕಲಬುರಗಿ ಕಡೆಯಿಂದ ಬರುತ್ತಿದ್ದ ಕಾರು ಕೆಪಿರ್ ಫ್ಯಾಕ್ಟರಿಗೆ ಕಬ್ಬು ತುಂಬಿಕೊಂಡು ಹೋಗುತ್ತಿರುವ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
“ಘಟನಾ ಸ್ಥಳಕ್ಕೆ ಚನ್ನಯ್ಯ, ಪಿಎಸ್ಐ ರಾಹುಲ್ ಪಾವಡೆ ಪೊಲೀಸ್ ಸಿಬ್ಬಂದಿ ಸಂಗಣ್ಣ ವಾಲೀಕರ್, ಭೀರನ್ನ ಪೀರನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.