
ಧರ್ಮಸ್ಥಳ ಸಂಘದ ಕಿರುಕುಳ ತಾಳಲಾರದೆ ಬೇಸತ್ತ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಬಳ್ಳಾರಿ ಕ್ಯಾಂಪ್ನಲ್ಲಿ ನಡೆದಿದೆ.
ಬಳ್ಳಾರಿ ಕ್ಯಾಂಪ್ ನಿವಾಸಿ ಅಕ್ರಮ್ ಎಂಬುವವರ ಹೆಂಡತಿ ಆಫ್ರಿನ್ ಬಿ ಎಂಬುವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆ ಎಂದು ತಿಳಿದುಬಂದಿದೆ.
ಹರಪನಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಧರ್ಮಸ್ಥಳ ಸಂಘ ಹಾಗೂ ಎಲ್ ಆಂಡ್ ಟಿ ಫೈನಾನ್ಸ್ನಿಂದ ಸಾಲ ಪಡೆದಿದ್ದಾರೆಂದು ತಿಳಿದುಬಂದಿದೆ.
ಸಂತ್ರಸ್ಥ ಮಹಿಳೆ ಆಫ್ರಿನ್ ಮಾತನಾಡಿ, “ನಮಗೆ ಒಂದೊತ್ತಿನ ಊಟಕ್ಕೂ ಕಷ್ಟಪಡುವಂತಹ ಪರಿಸ್ಥಿತಿ ಎದುರಾಗಿದೆ. ಸ್ವಲ್ಪ ಸಮಯ ಕೊಡಿ, ಸಾಲ ಮರುಪಾವತಿಸುತ್ತೇವೆಂದು ಹೇಳಿದರೂ ಕೇಳುತ್ತಿಲ್ಲ. ʼಯಾರ ಬಳಿಯಾದರೂ ಸಾಲ ಪಡೆದು ನಮ್ಮ ಸಾಲ ಕಟ್ಟಿ, ನೀವು ವಿಷ ತೆಗೆದುಕೊಳ್ಳುತ್ತೀರೋ, ಬಿಡ್ತಿರೊ ಅದು ನಮಗೆ ಬೇಕಿಲ್ಲ. ನೀವು ದುಡ್ಡು ಕಟ್ಟಕಬೇಕು ಅಷ್ಟೇʼ ಅಂತ ಧರ್ಮಸ್ಥಳ ಸಂಘದ ಅಧಿಕಾರಿ ಜಗದೀಶ್ ಎನ್ನವವರು ಕೆಟ್ಟಕೆಟ್ಟ ಶಬ್ದಗಳಿಂದ ಬೈದು ಬೆದರಿಸಿದ್ದಾರೆ. ಅವರ ಬೈಗುಳ ಕೇಳಿ ಬದುಕಬಾರದೆಂದು ಇಂಥ ನಿರ್ಧಾರ ತೆಗೆದುಕೊಂಡಿದ್ದೇನೆ. ಅವರ ಕಾಟ ತಡಯಲಾಗದ ನನಗೆ ಸಾವೇ ಗತಿ” ಎಂದು ಅವಲತ್ತುಕೊಂಡಿದ್ದಾರೆ.
“ಧರ್ಮಸ್ಥಳ ಸಂಘದ ಅಧಿಕಾರಿಗಳು ಪದೇಪದೆ ಮನೆ ಹತ್ತಿರ ಬಂದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಸಾಲ ಕಟ್ಟಬೇಕು ಅಂತ ರಾತ್ರಿ ಹತ್ತು ಗಂಟೆವರೆಗೂ ಮನೆ ಮುಂದೆ ಕುಂತು ಸಾಲ ವಸೂಲಿ ಮಾಡುತ್ತಾರೆ. ಈ ಸಂಘದ ಸಾಲ ಕಟ್ಟಲು ನಮ್ಮಕ್ಕ ಮತ್ತೊಂದು ಸಂಘದಲ್ಲಿ ಸಾಲ ತೆಗೆದುಕೊಳ್ಳಬೇಕು. ಈ ಸದ್ಯ ಸ್ವಲ್ಪ ಸಮಯ ಕೊಡಿ, ಹೀಗೆ ಕುಳಿತರೆ ಸಾಯುವುದೊಂದೇ ದಾರಿ ನಮಗೆ ಉಳಿದಿರುವುದು, ಎಂದರೆ, ʼಸಾಯಿರಿ, ಸತ್ತರೆ ಸಂಘದ ಸಾಲ ಮನ್ನಾ ಆಗುತ್ತೆʼ ಎಂದಿದ್ದಾರೆ. ಹಾಗಾಗಿ ನಮ್ಮಕ್ಕ ವಿಷ ಸೇವಿಸಿ ಸಾಯಲು ಮುಂದಾಗಿದ್ದಾಳೆ” ಎಂದು ಸಂತ್ರಸ್ತೆಯ ಸಹೋದರ ಆರೋಪಿಸಿದ್ದಾರೆ.
