
ಕೊಪ್ಪಳ ವಿಶ್ವವಿದ್ಯಾಲಯ ಮುಚ್ಚಿದರೆ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ವಿವಿಧ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
“ಹಿಂದಿನ ಬಹುತೇಕ ಎಲ್ಲ ಸರ್ಕಾರಗಳು ಕಲ್ಯಾಣ ಕರ್ನಾಟಕಕ್ಕೆ ಏನೆಲ್ಲ ಕೊಟ್ಟಿದ್ದೇವೆಂದು ಹೇಳುತ್ತವೆ. ಆದರೆ, ಕಲಬುರಗಿ ಜಿಲ್ಲೆಗೆ ಮಾತ್ರ ಹೆಚ್ಚಿನ ಆದ್ಯತೆ ನೀಡುತ್ತ ಬಂದಿದ್ದು, ಕೊಪ್ಪಳ ಜಿಲ್ಲೆಗೆ ಕೆಲ ವರ್ಷಗಳ ಹಿಂದೆ ಪ್ರಾರಂಭವಾದ ವಿಶ್ವವಿದ್ಯಾಲಯಕ್ಕೆ ಸೂಕ್ತ ಜಾಗ ನೀಡಲಾಗದ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸಂಪೂರ್ಣ ಹೊಣೆಗಾರರು. ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರದ ಸುತ್ತಮುತ್ತ ಜಾಗವನ್ನು ಗುರುತಿಸಿ ಈವರೆಗೂ ಒದಗಿಸಬೇಕಾಗಿತ್ತು. ಕೊಪ್ಪಳದ ಯುವಜನತೆ ಉನ್ನತ ಶಿಕ್ಷಣಕ್ಕೆ ದೂರದ ಊರುಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.
“ವಿಶ್ವವಿದ್ಯಾಲಯಕ್ಕೆ ಬೇಕಾದ ಜಾಗ, ವ್ಯವಸ್ಥಿತ ಕಟ್ಟಡ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕನಿಷ್ಠ ಪ್ರಯತ್ನವನ್ನೂ ಮಾಡದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ” ಎಂದು ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಆರೋಪಿಸಿದರು.
“ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ವಿಶ್ವ ವಿದ್ಯಾಲಯಗಳ ಪರಿಶೀಲನೆ ನಡೆಸಿ ಬಾಗಲಕೋಟೆಯ ಮಹಾರಾಣಿ ಕ್ಲಸ್ಟರ್, ಹಾವೇರಿ, ಮಂಡ್ಯ ನೃಪಪತುಂಗ ವಿಶ್ವವಿದ್ಯಾಲಯ, ಚಾಮರಾಜನಗರ, ಹಾಸನ ಸೇರಿದಂತೆ ಕೊಪ್ಪಳ ವಿಶ್ವವಿದ್ಯಾಲಯವು ಮುಚ್ಚುವ ಪಟ್ಟಿಯಲ್ಲಿದೆಯೆಂದು ವರದಿಯಾಗಿದ್ದು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ತಕ್ಷಣ ಕೊಪ್ಪಳ ವಿಶ್ವವಿದ್ಯಾಲಯ ಮುಂದುವರಿಸಲು ಅದಕ್ಕೆ ಬೇಕಾಗುವ ಜಾಗ, ಕಟ್ಟಡ, ಮೂಲಭೂತ ಸೌಲಭ್ಯ ಒದಗಿಸಲು ಪ್ರಯತ್ನಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ಮಾಡಿದ್ದೇ ಆದರೆ ತೀವ್ರ ಹೋರಾಟ ಮಾಡಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್ ಎ ಗಫಾರ್, ಭ್ರಾತೃತ್ವ ಸಮಿತಿಯ ಜಿಲ್ಲಾ ಸಹ ಸಂಚಾಲಕ ಚನ್ನಬಸಪ್ಪ ಅಪ್ಪಣ್ಣವರ್, ದಲಿತ ಯುವ ವೇದಿಕೆ ಜಿಲ್ಲಾ ಸಂಚಾಲಕ ಸುಂಕಪ್ಪ ಮೀಸಿ, ಮಖಬೂಲ್ ರಾಯಚೂರು ಸೇರಿದಂತೆ ಮುಂತಾದವರು ಇದ್ದರು.